ಈ ಮನಸು

ಈ  ಮನಸು █║▌│█│║▌║││█║▌║█║▌│█│║
ಈ ಮನಸು Verified Officia

ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? | ಸಂದರ್ಭ ಬರಲಿ, ಬಂದಾಗಳಾ ಚಿಂತೆ || ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು | ಇಂದಿಗಿಂದಿನ ಬದುಕು - ...
04/06/2024

ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? |
ಸಂದರ್ಭ ಬರಲಿ, ಬಂದಾಗಳಾ ಚಿಂತೆ ||
ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು |
ಇಂದಿಗಿಂದಿನ ಬದುಕು - ಮಂಕುತಿಮ್ಮ || ೬೮೧

ನಾಳಿನ ಚಿಂತೆಯ ಗೀಳನು ಹೊತ್ತವರೇ ಜಗದಲ್ಲಿ ಸಂಪೂರ್ಣವಾಗಿ ತುಂಬಿದ್ದಾರೆ. ದೂರಾಲೋಚನೆ ತಪ್ಪಲ್ಲ; ಆದರೆ ಆಲೋಚನೆಯೇ ಬದುಕಲ್ಲ. ಮಾನವರ ಬಹು ದೊಡ್ಡ ದೌರ್ಬಲ್ಯವೆಂದರೆ ಭವಿಷ್ಯತ್ತಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು ವರ್ತಮಾನವನ್ನು ಮರೆಯುವುದು. ಭವಿಷ್ಯದ ಬಗೆಗೆ ಇಟ್ಟುಕೊಳ್ಳುವ ಅತಿಯಾದ ಭಯವನ್ನು ಹೊಂದಿದವರು ಇಂದಿನ ಬದುಕಿನ ರಸಘಳಿಗೆಗಳನ್ನು ಅನುಭವಿಸಲಾರರು. ಇವರಿಗೆ ಕಗ್ಗ ಚಾಟಿ ಬೀಸುತ್ತದೆ.

ಎಂದೋ ಏನೋ ಆಗುತ್ತದೆ ಎಂದು ಇಂದಿನ ವಿಚಾರಗಳನ್ನು ಬಿಡಲಾಗದು. ಬಂದಾಗ ಎದುರಿಸುವ ಅನಿವಾರ್ಯತೆ ಇದ್ದೇ ಇದೆ. ಸಂದರ್ಭಗಳೇ ಇಲ್ಲದೆ ಎದುರಿಸುವುದು, ಕಾಯಿಲೆಯೇ ಬರದಂತೆ ಚುಚ್ಚುಮದ್ದು ತೆಗೆದುಕೊಂಡಂತೆ. ಬಂದಂದು ಹೊಂದಿಸುವುದು ಇದ್ದೇ ಇದೆ. ಮಕ್ಕಳ ಮದುವೆ ಎರಡು ದಶಕಗಳ ಅನಂತರ ಇದೆ ಎಂದು ಇವತ್ತಿನ ಊಟ ಬಿಡುವುದು ಹುಚ್ಚುತನವಾದೀತು. ಅಷ್ಟಕ್ಕೂ ಆ ದಿನದ ನಿರ್ಧಾರ ಮಾಡುವ ವಿಧಿ ನಮ್ಮ ಸೇವಕನಲ್ಲ ಎಂದ ಮೇಲೆ ಅವನು ನಮಗೆ ಬೇಕಾದಂತೆ ವೇದಿಕೆ ರಚಿಸುವುದಿಲ್ಲ. ನಮ್ಮ ಸಾಧನೆಯ ಮೆಟ್ಟಿಲು ನಾವೇ ಹತ್ತಬೇಕು. ಭವಿಷ್ಯದ ಬಗ್ಗೆ ಎಚ್ಚರಿಕೆ ಇರಬೇಕೇ ಹೊರತು ಹೆದರಿಕೆಯಲ್ಲ. ಕುವೆಂಪುರವರ ದೋಣಿಹಾಡಿನ ಘೋಷವಾಕ್ಯ ಮನದಲ್ಲಿ ಮೂಡುತ್ತದೆ. "ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ.''

ಪ್ರತೀ ಕ್ಷಣವನ್ನು ಆನಂದಿಸಿ ಅನುಭವಿಸುವ ಹರಿಕಾರರಾಗೋಣ. ವರ್ತಮಾನದಲ್ಲಿ ಬದುಕೋಣ.

ಉಂಡಾತನುಣುತಿರುವರನು ಕಾಣ್ಬನಲವಿಂದ । ಪಂಡಿತನು ವಿದ್ಯಾರ್ಥಿಗಳಿಗೊರೆವ ನಯದಿಂ || ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ । ಕಂಡೆಲ್ಲರೊಳು ತನ್ನ -...
03/06/2024

ಉಂಡಾತನುಣುತಿರುವರನು ಕಾಣ್ಬನಲವಿಂದ ।
ಪಂಡಿತನು ವಿದ್ಯಾರ್ಥಿಗಳಿಗೊರೆವ ನಯದಿಂ ||
ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ ।
ಕಂಡೆಲ್ಲರೊಳು ತನ್ನ - ಮಂಕುತಿಮ್ಮ || ೬೮೦

ಎಲ್ಲರಲಿ ತನ್ನ ಕಾಣುವವನೆ ಜ್ಞಾನಿ ಎನ್ನುತ್ತಾರೆ ದಿವಿಜರು. ಊಟ ಮಾಡಿದವನು ಊಟ ಮಾಡುತ್ತಿರುವವರನ್ನು ಕಂಡಾಗ ತಾಳ್ಮೆಯಿಂದ ನಿಧಾನವಾಗಿ ಊಟ ಮಾಡಿ ಎಂದು ಹೇಳುವ ಹಾಗೆ, ಅರಿತವನು ಅಂದರೆ ಗುರುವು ವಿದ್ಯಾರ್ಥಿಗಳಿಗೆ ಪ್ರೀತಿಯಿಂದಲೇ ಬೋಧಿಸುತ್ತಾನೆ.

ತಿಳುವಳಿಕೆಯುಳ್ಳವನು ಈ ಜಗತ್ತನ್ನೇ ಸಂತೈಸಬಲ್ಲ. ಏಕೆಂದರೆ ಅವನಿಗೆ ಎಲ್ಲರಲ್ಲಿಯೂ ತನ್ನನ್ನು ಕಾಣುವ ಶಕ್ತಿಯಿದೆ. ಮನುಷ್ಯ ಊಟದಲ್ಲಿ ಸಹಜವಾಗಿ ತೃಪ್ತಿಪಡಬಲ್ಲ. ಹಾಗೆಯೇ, ಊಟದಲ್ಲಿ ತೃಪ್ತಿ ಎನ್ನುವುದು ಅದನ್ನು ಬಡಿಸುವರ ಮೇಲೆ ಮತ್ತು ತಿನ್ನುವ ವಾತಾವರಣದ ಮೇಲೆ ಅವಲಂಬಿಸಿರುತ್ತದೆ. ಕೆಲವರಿಗೆ ತಮ್ಮ ಊಟವಾದರೆ ಸಾಕು ಬೇರೆಯದೇನೂ ಬೇಡವೆಂಬ ಸ್ವಭಾವ ಇರುತ್ತದೆ. ಅವರಿಗೆ ಸಮಾಜ, ಸಂಘ ಜೀವನದ ಅರ್ಥವೇ ತಿಳಿಯದು. ಭಾರತೀಯ ಸಂಸ್ಕೃತಿಯಲ್ಲಿ ಊಟಮಾಡುವಾಗ ಉಪಚರಿಸುವುದೂ ಒಂದು ಪ್ರಮುಖ ಆಚಾರವಾಗಿದೆ. ಭೋಜ್ಯೇಷು ಮಾತಾ ಎನ್ನುವುದು ಊಟ ಬಡಿಸುವುದರ ಮಹತ್ವವನ್ನು ಮತ್ತು ತಾಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.

ವಿದ್ಯೆಯನು ಕಲಿತ ಮೇಲೆ ತಾನೆ ಧಾರೆ ಎರೆಯಲು ಸಾಧ್ಯ. ಅದಕ್ಕೆ ಕಲಿಸುವನು ಗುರುವಾಗುತ್ತಾನೆ. ಕಲಿಯುವವರ ಗುರಿ ತೋರುತ್ತಾನೆ. ಜಗತ್ತು ಪಂಡಿತರನ್ನು ಸಮದರ್ಶಿ ಎನ್ನುತ್ತದೆ. ಸರ್ವಜ್ಞ ಇದನ್ನೇ ತನ್ನಂತೆ ಪರರ ಬಗೆದೊಡೆ ಬಿನ್ನಾಣವಕ್ಕು ಎನ್ನುತ್ತಾನೆ. ಪರರ ಕೆಲಸಗಳಲಿ ಒಳಿತು ಹುಡುಕುವ, (ಗುರುತಿಸೊಳಿತಿರುವುದನು ಕೇಡುಗಳ ನಡುವೆ) ತನ್ನೊಳಗಿರುವ ಒಳಿತನ್ನೇ ಹಂಚುವ ಮನಸ್ಥಿತಿ ನಮ್ಮದಾಗಲೆಂಬುದು ತಿಮ್ಮ ಗುರುವಿನ ಬಯಕೆ. ಅದರಂತೆ ನಡೆಯೋಣ.

ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ | ಹಸಿವನೊಂದುವನೆ ಹಿರಿಯನು? ನಲಿಯದಿಹನೆ? ||ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ- |ದೊಸೆದುನೋಳ್ಪನು ಜಾಣ - ...
02/06/2024

ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ |
ಹಸಿವನೊಂದುವನೆ ಹಿರಿಯನು? ನಲಿಯದಿಹನೆ? ||
ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ- |
ದೊಸೆದುನೋಳ್ಪನು ಜಾಣ - ಮಂಕುತಿಮ್ಮ || ೬೭೯

ಆಹಾರ, ನಿದ್ರೆ, ಕಾಮ ಎಲ್ಲವೂ ಆಯಾ ವಯೋಮಾನಕ್ಕೆ ಅನುಗುಣವಾಗಿ ಪ್ರಾಶಸ್ತ್ಯ ಪಡೆಯುತ್ತವೆ. ವಯಸ್ಸು ಮಾಗುತ್ತಿದ್ದಂತೆ ನಮ್ಮ ಆಹಾರದ ಅಭಿರುಚಿಗಳೂ ಬದಲಾಗುತ್ತವೆ. ಹಿರಿಯರು ತಮಗಿಂತ ಕಿರಿಯರ ಆಹಾರಾಪೇಕ್ಷೆಯನ್ನು ಗಮನಿಸಿ ಆನಂದತುಂದಿಲರಾಗುತ್ತಾರೆ. ಅದನ್ನೇ ಕಗ್ಗ ವಿಸ್ತರಿಸುತ್ತದೆ. ಮಕ್ಕಳು ಅವಲಕ್ಕಿ ಬೆಲ್ಲಗಳನ್ನು ಅತಿ ಪ್ರೀತಿಯಿಂದ ಸವಿಯುವುದನ್ನು ಕಂಡಾಗ ಹಿರಿಯರು ಆನಂದ ಪಡುವರೇ ಹೊರತು ತಮಗೆ ಹಸಿವೆಂದು ಕಿತ್ತು ಕೊಳ್ಳುವುದಿಲ್ಲ. ಮಕ್ಕಳಿಗೆ ಅಕ್ಕರೆಯ ಗುಕ್ಕನಿಡುವ ಸಂಸ್ಕೃತಿ ನಮ್ಮದು. ಅದರಿಂದ ಸಿಗುವ ಸುಖಕೆ ಎಲ್ಲೆಯಿದೆಯೇ? ತಲೆಮಾರನ್ನು ಬೆಳೆಸುವುದೇ ಗುಟುಕನ್ನು ನೀಡುವ ಮೂಲಕ ಜನ ತಮ್ಮ ಹೊಟ್ಟೆ ಬಟ್ಟೆ ಕಟ್ಟಿಯೇ ಪುಟ್ಟ ಮಕ್ಕಳ ಬೆಳವಣಿಗೆಗೆ ಕಾರಣರಾಗುತ್ತಾರೆ.

ಅದೇ ರೀತಿ ವಿಷಯ ಎಂದರೆ ಭೋಗಾಭಿಲಾಷೆಗಳು. ಆದರೆ, ಯೌವನದಲ್ಲಿ ಕಾಮವೇ ಪ್ರಧಾನ ಅಲ್ಲವೇ. ವಯೋ ಸಹಜವಾದ ಆಸೆಗಳನ್ನು ಅದುಮಿಡಬಾರದು. ಅದನ್ನು ಮೆಟ್ಟಿ ನಿಲ್ಲಲೂ ಬಾರದು. ಹಾಗೆಯೇ, ಅವಧಿ ಮೀರಿದ ಮೇಲೆ ಅನುಭವಿಸುವ ಹಠಮಾರಿತನವೂ ಇರಬಾರದು.

ಹಾಗೇ ಯಾರ ಕಾಮಾಸಕ್ತಿಯೂ ನಮಗೆ ಅವರ ಬಗ್ಗೆ ಅನಾದರ ಮೂಡಿಸದೆ ಆ ಕಡೆಗೆ ಗಮನ ಕೊಡದಂತೆ ಇರಬೇಕು ಎನ್ನುವ ತತ್ತ್ವವನ್ನು ಅಳವಡಿಸಿಕೊಳ್ಳುವುದು ಉತ್ತಮ. ನಮ್ಮ ಚತುರ್ವಿಧ ಪುರುಷಾರ್ಥಗಳಲ್ಲಿ ಕಾಮ ಮೂರನೆಯದು. ಉಳಿದವು ಧರ್ಮ ಅರ್ಥ ಮತ್ತು ಮೋಕ್ಷಗಳು. ಕಾಮಕ್ಕೆ ತನ್ನದೇ ಆದ ವಿಶೇಷತೆಯಿದೆ. ವಂಶದೇಳಿಗೆಗಾಗಿಯೂ ಅದರ ಅವಶ್ಯಕತೆಯಿದೆ. ಆದ್ದರಿಂದ, ತನಗಿಂತ ಕಿರಿಯರ ಅಥವಾ ಸಮಕಾಲೀನರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆ ವಿಚಾರವನ್ನು ಮೆರೆಸದೆ ಮರೆಸಿ, ಪ್ರೀತಿಯಿಂದ ಅದನ್ನು ಕಂಡು ಸುಮ್ಮನಾಗುವುದು ಒಳಿತಲ್ಲವೇ?

ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ | ನಿನ್ನ ಮಮತೆಯ ನೂಲ ವಿಧಿಯು ಪರಿದಂದು || ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು | ಛಿನ್ನವಾದಂದೆ ಸೊಗ -...
31/05/2024

ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ |
ನಿನ್ನ ಮಮತೆಯ ನೂಲ ವಿಧಿಯು ಪರಿದಂದು ||
ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು |
ಛಿನ್ನವಾದಂದೆ ಸೊಗ - ಮಂಕುತಿಮ್ಮ || ೬೭೮

ನೂಲು= ದಾರ, ಅಂಟು, ಬಂಧ ; ಛಿನ್ನ = ನಾಶ, ಚೂರು ; ಸೊಗ = ಸುಖ.

ಯಾವ ಕ್ಷಣವು ನಮ್ಮನ್ನು ಲೋಕದ ಮಮತೆಯಿಂದ ದೂರಾಗಿಸಿ ಆತ್ಮೋನ್ನತಿಯನ್ನು ಉಂಟು ಮಾಡುವುದೋ ಅದೇ ಘಳಿಗೆಯು ನಮ್ಮ ಜೀವನೋತ್ಕೃಷ್ಠ ಘಳಿಗೆಯಾಗಿ ಬಾಳಿಗೆ ಧನ್ಯತೆಯನ್ನು ಆತ್ಮಕ್ಕೆ ಪುಣ್ಯವನ್ನೂ ನೀಡುತ್ತದೆ. ಯಾವ ಕ್ಷಣವು ನಮ್ಮ ಉನ್ನತಿಯನ್ನು ತಡೆಯುವ ಪಾಶಗಳನ್ನು ಇಲ್ಲವಾಗಿಸುತ್ತದೆಯೋ ಅದೇ ಸುಖವನ್ನು ಸಂಭ್ರಮಿಸುವ ಕ್ಷಣವಾಗಿದೆ. ಜಗಕೆ ಆತ್ಮವು ದೇಹರೂಪದಿಂದ ಪ್ರವೇಶ ಮಾಡಿದ ಕ್ಷಣದಿಂದ ಮೋಹ ಮಮತೆಗಳ ಪಾಶ ನಮ್ಮನ್ನು ಆವರಿಸುತ್ತದೆ. ಇದೇ ನೂಲಿನ ಅಂಟು. ಜಗದ ನಂಟನ್ನು ಬೆಸೆವ ಅಂಟು. ಬಾಂಧವ್ಯವನ್ನು ಹೊಸೆವ ನೂಲು.

ಯಾವುದು ಅತಿಯಾಗಿ ಬೆಸೆದುಕೊಳ್ಳುವುದೋ ಅದನ್ನು ಬಿಡಿಸುವುದೇ ವಿಧಿಯ ಉದ್ಯೋಗ. ಬೆಸುಗೆಯು ಸಡಿಲಗೊಂಡರೆ ಮಾತ್ರ ಸಾಧನೆಯ ಹಾದಿಯತ್ತ ಗಮನ ಹರಿಸಲು ಸಾಧ್ಯ. ನಾವಾಗಿ ಲೋಕ ಮೋಹವನ್ನು ಬಿಡದಿದ್ದರೆ ವಿಧಿ ತಾನಾಗಿ ಅದನ್ನು ಬಿಡಿಸುತ್ತಾನೆ. ನಮ್ಮ ಆತ್ಮೋನ್ನತಿಗೆ ಅಡ್ಡಿಯಾಗುವ ಅರಿಷಡ್ವರ್ಗಗಳೇ ದಿಟದ ವೈರಿಗಳು. ಅವುಗಳಿಂದ ದಾರಿ ಬಿಡಿಸಿಕೊಂಡು ಹೋದರೆ ನಿಜವಾದ ಸುಖ. ಸುಖವೆಂಬ ಭ್ರಮೆಯನ್ನು ಕಳಚುವ ಮುನ್ನ ನಿಜದ ಸುಖವೇನೆಂದು ಅರಿಯಬೇಕು. ಆತ್ಮೋದ್ಧಾರಕ್ಕೆ ದೇಹ ನಿಲ್ದಾಣವೆಂಬ ಸತ್ಯದ ಬೆಳಕಲ್ಲಿ ಮೀಯಬೇಕು.

ನೀನುಂಡರೇಂ? ಪುಷ್ಟಿ ಮೈಗಾಗುವುದು । ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ || ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? । ಮುಷ್ಟಿ ಪ...
31/05/2024

ನೀನುಂಡರೇಂ? ಪುಷ್ಟಿ ಮೈಗಾಗುವುದು ।
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ ||
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ।
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ || ೬೭೭

ಮುಷ್ಟಿ = ಹಿಡಿ ; ಪಿಷ್ಟ = ಹಿಟ್ಟು.

ಗಳಿಸುವುದಕ್ಕಿಂತ ಉಳಿಸುವುದು ದೊಡ್ಡದು. ಹಾಗೆಯೇ ತಿಂದುದಕಿಂತ ಜೀರ್ಣಿಸಿಕೊಳ್ಳುವುದು ದೊಡ್ಡದು. ಕಂಡಿದ್ದೆಲ್ಲಾ ಅನುಭವಿಸಲಾಗದು, ನೋಟದ ಮಾಟವೆಲ್ಲಾ ಬೇಟವೆನಿಸದು, ಮುಟ್ಟಿದ್ದೆಲ್ಲ ಇಟ್ಟುಕೊಳ್ಳಲಾಗದು, ಉಂಡದ್ದೆಲ್ಲಾ ಅರಗಿಸಲಾಗದು.

ತಿಂದ ವಸ್ತುಗಳೆಲ್ಲಾ ಶಕ್ತಿಮೂಲಗಳಾಗುವುದಿಲ್ಲ. ಆ ವಸ್ತುಗಳಲ್ಲಿ ನಾವು ಎಷ್ಟು ಜೀರ್ಣಿಕೊಳ್ಳುತ್ತೇವೆಯೋ ಅಷ್ಟು ಮಾತ್ರ ದೇಹಕ್ಕೆ ಶಕ್ತಿಯನ್ನೂ, ಪುಷ್ಟಿಯನ್ನೂ ನೀಡುತ್ತದೆ. ಮಿಕ್ಕಿದ್ದು ಮಲವಾಗಿ ವರ್ಜಿಸಲ್ಪಡುತ್ತದೆ. ಅಂದರೆ, ನಮ್ಮ ಗಳಿಕೆಯಲ್ಲಿ ನಮಗುಳಿವುದು ಅಲ್ಪಮಾತ್ರ. ಆ ಅಲ್ಪವನ್ನು ಕಲ್ಪವಾಗಿಸುವುದೇ ಸಾಧಕರ ಬಾಳಿನ ಸೂತ್ರ.

ಬದುಕಲು ತಿನ್ನಬೇಕೇ ಹೊರತು, ತಿನ್ನಲು ಬದುಕಬಾರದು. ಇದು ಮಾನವನ ಬಾಳಿನ ಸೂತ್ರವಾದಾಗ ಬದುಕು ಇತರರಿಗೆ ಮಾದರಿಯಾಗುತ್ತದೆ. ಹಾಗೆ ನೋಡಿದರೆ ಬಾಲ್ಯದಲ್ಲಿ ಮಾತ್ರ ನಾವು ಬೇಕಾಬಿಟ್ಟಿ ತಿನ್ನುತ್ತೇವೆ. ಒಮ್ಮೆ ಬಾಳಿನ ಹೋರಾಟಕ್ಕೆ ಕಾಲಿಟ್ಟರೆ ಮುಗಿಯಿತು, ತಿನ್ನುವುದು ಮರೆತೇ ಹೋಗುತ್ತದೆ. ಆದ್ದರಿಂದ ದೇಹ ಪುಷ್ಟಿಗೆಂದು ತಿಂದು ಮಿಕ್ಕುದನ್ನು ಅಂದರೆ ಮಿಕ್ಕ ಸಂಪಾದನೆಯನ್ನು ಮತ್ತೆ ಸಮಾಜಕ್ಕೆ ನೀಡಬೇಕೆಂಬ ಆಶಯವನ್ನು ಕಗ್ಗ ನೀಡುತ್ತದೆ.

ಸ್ವಾರಸ್ಯವಮಿತಮಾರಿಗುಮಿರದು ಜೀವನದಿ । ಪಾರದಿರ್ಕೆಯ ನೆನೆದು ನೆಡೆಯಲದು ಸಫಲ ॥ ಸಾರಂಗಳ್ ಎಲ್ಲ ಪಣ್ಗಳವುಮ್ ಒಂದರೊಳಿರವು | ಆರೋಗಿಸಿರುವುದನು - ಮ...
29/05/2024

ಸ್ವಾರಸ್ಯವಮಿತಮಾರಿಗುಮಿರದು ಜೀವನದಿ ।
ಪಾರದಿರ್ಕೆಯ ನೆನೆದು ನೆಡೆಯಲದು ಸಫಲ ॥
ಸಾರಂಗಳ್ ಎಲ್ಲ ಪಣ್ಗಳವುಮ್ ಒಂದರೊಳಿರವು |
ಆರೋಗಿಸಿರುವುದನು - ಮಂಕುತಿಮ್ಮ || ೬೭೬

ಜಗತ್ತಿನಲ್ಲಿ ಮಿತಿಯ ಬಗ್ಗೆ ಅರಿತವನೇ ನಿಜವಾದ ಜಾಣ. ಅರಿವನ್ನು ಮತಿ ಎಂದು ಕೊಂಡರೆ, ಈ ಕಗ್ಗವು ಮಿತಿ ಮತ್ತು ಮತಿಗಳ ನಡುವಣ ಸ್ವಾರಸ್ಯವಾಗಿದೆ. ಇಲ್ಲಿ ಸ್ವಾರಸ್ಯ ಎನ್ನುವುದು ಸುಖ ಅಥವಾ ತೃಪ್ತಿ ಎಂಬ ಭಾವಾರ್ಥ ನೀಡುತ್ತದೆ. ಜೀವನದಲ್ಲಿ ಅಮಿತವಾದ ಸುಖ ಯಾರಿಗೂ ಇರುವುದಿಲ್ಲ. (ಒಂದು ವೇಳೆ ಇದ್ದರೆ ಇಳಿಮುಖ ಸೀಮಾಂತ ತುಷ್ಟಿಗುಣದ ಹಾಗೆ ಅದರ ಮೇಲಿನ ಆಸೆಯೇ ತಪ್ಪಿಹೋದೀತು.) ಪಾರ ಎಂದರೆ ದಂಡೆ ಅಥವಾ ಮಿತಿ. ಎಲ್ಲಕ್ಕೂ ಒಂದು ಮಿತಿಯಿದೆ ಎಂದು ಅರಿತು ನಡೆದರೆ ನಮ್ಮ ಗಮ್ಯ ಸ್ಥಾನ ತಲುಪಲು ಸಾಧ್ಯ. ಎಲ್ಲ ಹಣ್ಣುಗಳ ರುಚಿಯೂ ಒಂದು ಹಣ್ಣಿನಲ್ಲಿ ಇರಲು ಸಾಧ್ಯವಿಲ್ಲ. ಆದ್ದರಿಂದ ಇರುವುದನ್ನು ಸ್ವೀಕರಿಸು, ಅನುಭವಿಸು ಎನ್ನುತ್ತಾರೆ ತಿಮ್ಮ ಗುರು.

ಸುಖ ಎಂದರೇನು? ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ನಮಗೆ ಯಾವುದರ ಅವಶ್ಯಕತೆ ಇರುತ್ತದೆಯೋ ಅದು ಆಗ ನಮಗೆ ಸಿಕ್ಕರೆ ಅದೇ ಸುಖ ಎನ್ನಬಹುದು. ಉದಾಹರಣೆಗೆ ನಮಗೆ ಹಸಿವಾಗಿದ್ದಾಗ ಊಟ ಸಿಕ್ಕರೆ ಅದು ಸುಖ. ಊಟ ಮಾಡಿದ ಮೇಲೆ ಎಷ್ಟೇ ಉತ್ತಮ ಊಟ ಸಿಕ್ಕರೂ ತಿಂದರೆ ಉದರ ಬೇನೆ ಖಚಿತ. ಆಯಾಸಗೊಂಡವನಿಗೆ ಸಿಗುವ ಒಂದು ಲೋಟ ನೀರು, ತೂಕಡಿಸುವವನಿಗೆ ಸಿಗುವ ಸ್ವಲ್ಪ ನಿದ್ರೆ, ಹೋರಾಟಗಾರನಿಗೆ ಸಿಕ್ಕ ಜಯ ಇವೆಲ್ಲವೂ ಸುಖದ ಮೂಲಗಳೇ. ಆದರೆ ಇರುವ ಸುಖವನ್ನು ಬಿಟ್ಟು ಉಳಿದೆಲ್ಲ ಸುಖಗಳನು ಬಯಸಿದರೆ ದಕ್ಕುವುದಿಲ್ಲ. ಹಾಗೆಯೇ ಒಂದೊಂದು ಹಣ್ಣಿಗೂ ತನ್ನದೇ ಆದ ರುಚಿಯಿದೆ. ಆದ್ದರಿಂದಲೇ, ಆಯಾಕಾಲಕ್ಕೆ ಬರುವ ಹಣ್ಣುಗಳನ್ನು ಸವಿದು ಸುಖ ಪಡುತ್ತೇವೆ. ಅಂದರೆ ''ಮಿತಿಯರಿತು ನಡೆವರ್ಗೆ ದೇವತೆಗಳೊಲಿದಪರ್" - ಬಿಎಂಶ್ರೀ ರವರ ಮಾತನ್ನು ಗಮನಿಸಬೇಕು. ಎಲ್ಲ ಹಣ್ಣುಗಳ ರುಚಿಯನ್ನು ಒಂದರಲ್ಲೇ ಬಯಸುವುದು ದುರಾಸೆ ಅಲ್ಲವೇ? ಆದ್ದರಿಂದ ನಮ್ಮ ಬುದ್ಧಿಯು ಮಿತಿಯ ಮಹತ್ತ್ವವನ್ನು ಅರಿತು ನಡೆದರೆ ಬದುಕು ಸಾರ್ಥಕವಾಗುವುದು. ಇಲ್ಲದಿರೆ ಜೋಲುಮೋರೆ ಹೊತ್ತು ಸಾಗಬೇಕಾಗುತ್ತದೆ. ಮಿತಿಯನ್ನು ಅರಿತು ಬದುಕೋಣ.

ಅಪರಿಮಿತವೇನಲ್ಲ ಜೀವನಕೆ ಲಭ್ಯ ಸುಖ | ಚಪಲದಿಂ ಕಣ್ಣನತ್ತಿತ್ತಲಲಸುತಿರೆ || ಸ್ವಪರಿಸ್ಥಿತಿಯ ಧರ್ಮ ನಷ್ಟವಹುದೊಂದೆ ಫಲ | ವಿಫಲ ವಿಪರೀತಾಶೆ - ಮಂಕ...
28/05/2024

ಅಪರಿಮಿತವೇನಲ್ಲ ಜೀವನಕೆ ಲಭ್ಯ ಸುಖ |
ಚಪಲದಿಂ ಕಣ್ಣನತ್ತಿತ್ತಲಲಸುತಿರೆ ||
ಸ್ವಪರಿಸ್ಥಿತಿಯ ಧರ್ಮ ನಷ್ಟವಹುದೊಂದೆ ಫಲ |
ವಿಫಲ ವಿಪರೀತಾಶೆ - ಮಂಕುತಿಮ್ಮ || ೬೭೫

ಸುಖ ಎಂದರೆ ಏನು ಎಂಬ ಅರ್ಥ ಯಾರಿಗೂ ಆಗುವುದೇ ಇಲ್ಲ. ಸುಖವು ಒಬ್ಬರಿಂದೊಬ್ಬರಿಗೆ ಭಿನ್ನವಾಗಿರುತ್ತದೆ. ಸುಖವು ಎಂದಿಗೂ ಅಪರಿಮಿತವಲ್ಲ. ಅದಕ್ಕೆ ಒಂದು ಮಿತಿಯಿದೆ. ಆದರೆ ಅತಿಯಾದ ಸುಖಕ್ಕೆ ರೋಸಿ ನಮ್ಮ ಮನ ಚಪಲವಾದರೆ ಇರುವ ಸುಖವನ್ನು ಕಳೆದು ಕೊಳ್ಳುತ್ತೇವೆ. ವಿಪರೀತವಾದ ಆಸೆಯು ಯಾವಾಗಲೂ ವಿಫಲವಾಗುತ್ತದೆ.

ಅಲ್ಲಮ ಒಂದು ಕಡೆ ಹೀಗೆ ಹೇಳುತ್ತಾನೆ - "ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ." ನಮ್ಮ ಜೀವನದ ಅನೇಕ ಪ್ರಸಂಗಗಳು ನಮ್ಮನ್ನು ಸುಖವಾಗಿ ಇರುವಂತೆ ಪ್ರೇರೇಪಿಸುತ್ತವೆ. ಆದರೆ ಅವುಗಳ ಹಿಂದಿನ ಮರ್ಮ ಆಯಾ ಸಂದರ್ಭಗಳಿಗೆ ಮಾತ್ರ ಅನ್ವಯವಾಗುತ್ತದೆ. ಅತಿಯಾದ ಆಸೆ ಗತಿಕೇಡನ್ನೇ ತರುತ್ತದೆ.

ಕನ್ನಡಿಯ ಗಂಟಿಗಾಗಿ ಕೈಯಲ್ಲಿರುವ ದಂಟನ್ನು ಕಳೆದು ಕೊಳ್ಳಬೇಕಾಗುತ್ತದೆ. ಹಳ್ಳಿಯ ಕಡೆಗಳಲ್ಲಿ ಎರಡು ಕೊಠಾರದ ದಾಸಯ್ಯ ಎಂಬ ಮಾತಿದೆ. ಸುಗ್ಗಿಯ ದಿನಗಳಲ್ಲಿ ಕಣ ಅಥವಾ ಕೊಠಾರ ಮಾಡಿಕೊಂಡು ಧಾನ್ಯವನ್ನು ಒಕ್ಕಣೆ ಮಾಡುವಾಗ ದಾಸಯ್ಯಗಳಿಗೆ ಭಿಕ್ಷೆ ನೀಡುತ್ತಾರೆ. ಅದೂ ರಾಶಿ ಪೂಜೆಯ ನಂತರ. ದಾಸಯ್ಯ ಆತುರದಿಂದ ಅತ್ತಿತ್ತ ಅಲೆದಾಡಿದರೆ ಎರಡೂ ಕಡೆಯೂ ಭಿಕ್ಷೆ ದಕ್ಕುವುದಿಲ್ಲ. ಇಲ್ಲಿಯೂ ಹಾಗೆಯೇ ನಮ್ಮಲ್ಲಿರುವ ಸುಖವನ್ನು ಅನುಭವಿಸದೇ ಅದನ್ನು ಬೇರೆಡೆ ಹುಡುಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಅವರವರ ಭಾಗಕ್ಕೆ ಬಂದುದನ್ನು ಪಾಲಿಗೆ ಬಂದ ಪಂಚಾಮೃತದಂತೆ ಭಾವಿಸಿ ಸ್ವೀಕರಿಸಬೇಕು. ಹಾಗೆಯೇ ಪ್ರಕೃತಿಯೂ ಸಹಾ ನಮ್ಮ ಆಸೆಗಳನ್ನು ಪೂರೈಸಬಹುದೆ ಹೊರತು ದುರಾಸೆಗಳನ್ನಲ್ಲ. ನಮ್ಮ ಆಸೆಗಳು ಸಹಜವಾಗಿ ಇದ್ದಾಗ ಅವುಗಳ ಪೂರೈಕೆ ಸಾಧ್ಯವಾಗಿ ಬದುಕು ಸುಖ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ. ಇಲ್ಲದಿದ್ದರೆ ಸಿಗದ ಬಯಕೆಗಳ ನಡುವೆ ಇರುವ ಸುಖವನ್ನು ಮಣ್ಣು ಪಾಲು ಮಾಡಿದಂತಾಗುತ್ತದೆ. ಆದ್ದರಿಂದ ಅತಿಯಾಸೆ ಒಳ್ಳೆಯದಲ್ಲ ಎಂಬುದು ಜೀವನ ಪಾಠವಾಗಬೇಕು.

ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ |ತೊಟ್ಟಲಿಗೆ ಹಬ್ಬ ಮಸಣವು ತೇಗುತಿರಲು || ಹುಟ್ಟಿದವರೆಲ್ಲ ಸಾಯದೆ ನಿಲ್ತೆ, ಹೊಸತಾಗಿ । ಹುಟ್ಟುವರ್ಗೆಡ...
27/05/2024

ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ |
ತೊಟ್ಟಲಿಗೆ ಹಬ್ಬ ಮಸಣವು ತೇಗುತಿರಲು ||
ಹುಟ್ಟಿದವರೆಲ್ಲ ಸಾಯದೆ ನಿಲ್ತೆ, ಹೊಸತಾಗಿ ।
ಹುಟ್ಟುವರ್ಗೆಡೆಯೆಲ್ಲಿ? - ಮಂಕುತಿಮ್ಮ || ೬೭೪

ಹಳೆನೀರು ಹರಿಯದಿರೆ ಹೊಸನೀರು ಬಂದೀತು ಹೇಗೆ? ಹೊಳೆಯ ಕೊಳೆ ತೊಳೆದೀತು ಹೇಗೆ? ನಮ್ಮ ಮನಸಿನ ಹಾಗೆ. ಕಗ್ಗವು ಎರಡು ಪ್ರತಿಮೆಗಳನ್ನು ಹೇಳುತ್ತಾ ಹೊಸ ತತ್ತ್ವದ ಹರಿಕಾರನಾಗಿದೆ. ಅವು ತೊಟ್ಟಿಲು ಮತ್ತು ಮಸಣ; ಆರಂಭ ಮತ್ತು ಅಂತ್ಯಗಳ ಸಂಕೇತ. ಎರಡೂ ಒಂದಕ್ಕೊಂದು ಖೋ ಹೇಳುವ ಖೋ ಖೋ ಆಟ.

ಒಂದು ಹಬ್ಬವಾದರೆ, ಮತ್ತೊಂದು ತೃಪ್ತಿ, ದಣಿದ ಮೇಲೆ ತಣಿಯಲೇ ಬೇಕು. ತೊಟ್ಟಿಲು ನಮ್ಮ ಜನಾಂಗವನ್ನು ಮುಂದುವರೆಸುವ ಪ್ರತೀಕವಾಗಿ, ಜೊತೆಗೆ ವಂಶಾಭಿವೃದ್ಧಿಯನ್ನು ಸೂಚಿಸುವ ಪ್ರತಿಮೆಯಾಗಿ ವಿರಾಜಿಸುತ್ತದೆ. ಮಸಣವು ಹುಟ್ಟಿದ ಜೀವಿಗಳಿಗೆ ಚಿರ ವಿಶ್ರಾಂತಿಯನ್ನು ನೀಡುವ ಮೂಲಕ ಎಲ್ಲ ನೋವಿನ ವಿರಾಮ ಸಾವು ಎಂಬುದನ್ನು ಧ್ವನಿಸಿಬಿಡುತ್ತದೆ. ಎರಡರಲ್ಲಿ ಯಾವುದೂ ನಿಲ್ಲುವಂತಿಲ್ಲ, ನಿಲ್ಲಬಾರದು. ಹಬ್ಬದ ಹರ್ಷಧ್ವನಿಯೊಡನೆ ಆರಂಭವಾಗುವ ಹುಟ್ಟು ಮಸಣದ ಸಮಾಧಿಯ ಒಳಗೆ ಸೇರುವ ಸಾವನ್ನು ಅವಲಂಬಿಸಿರುತ್ತದೆ.

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು | ತಿಂದು ನಿನ್ನನ್ನಋಣ ತೀರುತಲೆ ಪಯಣ ||ಹಿಂದಾಗದೊಂದು ಚಣ, ಮುಂದಕುಂ ಕಾದಿರದು |ಸಂದ ಲೆಕ್ಕವದೆಲ್ಲ – ಮ...
27/05/2024

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು |
ತಿಂದು ನಿನ್ನನ್ನಋಣ ತೀರುತಲೆ ಪಯಣ ||
ಹಿಂದಾಗದೊಂದು ಚಣ, ಮುಂದಕುಂ ಕಾದಿರದು |
ಸಂದ ಲೆಕ್ಕವದೆಲ್ಲ – ಮಂಕುತಿಮ್ಮ || ೬೭೩

ಜಗದ ಪ್ರತಿಯೊಂದು ವಿಚಾರಕ್ಕೂ ಲೆಕ್ಕವಿದೆ. ಕ್ರಿಮಿ ಕೀಟಗಳಿಂದ ದೊಡ್ಡ ಜೀವಿಯ ಜೀವಿತವೂ ಲೆಕ್ಕಾಚಾರವೇ. ಸುತ್ತುಗಟ್ಟಿದ ವೃತ್ತದೊಳಗೆ ಇರುವ ತನಕ ಮಾತ್ರ ಬದುಕು. ಪರಿಧಿ ಮೀರಿದ ಮೇಲೆ ಮುಗಿಯಿತು ಬದುಕಿನ ಕೊನೆಯನ್ನ ಕಾಣಲೇಬೇಕು. ನಮ್ಮಲ್ಲಿ ಋಣವೆನ್ನುವ ಪದ ಬಹಳ ಮಹತ್ತ್ವ ಪಡೆದು ಕೊಂಡಿದೆ. ಋಣ ಎಂದರೆ ಸಾಲ, ಹಂಗು ಎಂಬ ಸಾಮಾನ್ಯ ಅರ್ಥವಿದೆ. ಆದರೆ, ಇಲ್ಲಿ ಋಣವೆಂದರೆ ಲಭ್ಯತೆ, ಸಿಗಬಹುದಾದದ್ದು, ನಮಗೆಂದೇ ಮೀಸಲಿಟ್ಟಿದ್ದು ಎಂದು ಅರ್ಥೈಸಿಕೊಳ್ಳಬೇಕು. ದೇವ ಋಣ, ಪಿತೃ ಋಣ, ಮುಂತಾದವು ನಾವು ತೀರಿಸ ಬೇಕಾದವು. ಅನ್ನದ ಋಣ, ಮಣ್ಣಿನ ಋಣ, ನೀರಿನ ಋಣ, ಸುಖ ದುಃಖಗಳ ಋಣವು ನಮಗೆ ದಕ್ಕಬೇಕಾದ ಅಥವಾ ದಕ್ಕಬಹುದಾದ ವಿಚಾರವನ್ನು ಕುರಿತದ್ದಾಗಿದೆ. ಅಂದರೆ, ಋಣವು ನಾವು ಕೊಡುವ, ನಮಗೆ ಸಿಗುವ ಎರಡೂ ಅರ್ಥವನ್ನು ಹೊಂದಿದೆ ಎಂದಂತಾಯಿತು.

ಈಗ ಕಗ್ಗವನ್ನು ಗಮನಿಸೋಣ. ಈ ಲೋಕದಲ್ಲಿ ನಮ್ಮ ಇರುವಿಕೆಯು ಪೂರ್ವ ನಿರ್ಧರಿತವಾದದ್ದು. ಅನ್ನ ಎಂದರೆ ನಮ್ಮ ಆಹಾರದ ಋಣ ತೀರಿದ ಕೂಡಲೇ ನಾವು ಇಲ್ಲಿಂದ ಹೊರಡಲೇ ಬೇಕು ಎಂಬ ಮಾತಿನ ಹಿಂದೆ ಅನ್ನದ ಋಣ ತೀರುವವರೆಗೆ ಜಗದಿಂದ ವಿರಮಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನೂ ಮನಗಾಣಬೇಕು. ಇದೇ ಕರ್ಮಸಿದ್ಧಾಂತದ ತಿರುಳು. ನಮ್ಮ ಬಾಳ ಪಯಣ ಮುಗಿದ ಮರುಕ್ಷಣ ನಾವು ಸಾವಿನ ಮಡಿಲು ಸೇರಲೇ ಬೇಕೆಂಬ ಸತ್ಯವನ್ನು ಅರಿತಾಗ ಬದುಕನ್ನು ಸಾರ್ಥಕವಾಗಿಸಿ ಬಾಳಬಹುದು. ಆದರೆ ಬಹುತೇಕರಿಗೆ ಇದನ್ನು ಅರಿಯುವ ವೇಳೆಗೆ ಅವರು ಜೀವನ ಸಂಧ್ಯೆ ತಲುಪಿರುತ್ತಾರೆ. ಹಾಗಾಗಿ ಉಳಿದ ಅಲ್ಪ ಸಮಯವನ್ನು ಕೊರಗಿನಲ್ಲಿ ಕಳೆಯುವ ಅನಿವಾರ್ಯತೆಗೆ ಸಿಲುಕುತ್ತಾರೆ. ಈ ಕಗ್ಗದ ಮಹತ್ವವನ್ನು ಬಾಳಿನಾರಂಭದಲ್ಲಿ ಅರಿತವರು ಸಾಧಕರಾಗುತ್ತಾರೆ. ನಮ್ಮಿಂದ ಚೆನ್ನಾಗಿ ಬಾಳಲು ಸಾಧ್ಯವಿದೆ ಎಂದ ಮೇಲೆ ಅದನ್ನು ನಾವು ಸಾಧಿಸುವುದು ನಮ್ಮ ಕರ್ತವ್ಯವಾಗಬೇಕು.

ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ | ಸತ್ರದಲಿ ನೇಮದಿಂದಿರಲಿಕೆಡೆಯುಂಟು ||ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು- |ಪತ್ಯದವ ಮೆಚ...
26/05/2024

ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ |
ಸತ್ರದಲಿ ನೇಮದಿಂದಿರಲಿಕೆಡೆಯುಂಟು ||
ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು- |
ಪತ್ಯದವ ಮೆಚ್ಚುವನು – ಮಂಕುತಿಮ್ಮ || ೬೭೨

ಲೋಕವೆಂಬ ಛತ್ರದಲ್ಲಿ ಉಳಿದ ಯಾತ್ರಿಕರು ನಾವು ಅಂದಮೇಲೆ ಅಲ್ಲಿನ ನಿಯಮಗಳನ್ನು ಪಾಲಿಸಲೇ ಬೇಕು ಎಂಬ ಸಾಮಾನ್ಯ ಅರಿವಿನ ಜೊತೆ ಬಾಳಬೇಕು. ಹಿಂದಿನ ಕಾಲದಲ್ಲಿ ದಾರಿಹೋಕರಿಗೆ ಆಶ್ರಯವಾಗಿರಲೆಂದು ಧರ್ಮಛತ್ರಗಳನ್ನು ನಿರ್ಮಾಣ ಮಾಡುತ್ತಿದ್ದರು. ಅಲ್ಲಿ ಉಳಿಯಲು ಕೆಲವು ನಿಯಮಗಳ ಪಾಲನೆ ಅವಶ್ಯವಿತ್ತು. ಮೊದಲು ಬಂದವರಿಗೆ ಆದ್ಯತೆಯಿದ್ದರೂ, ಅನಂತರ ಬಂದವರಿಗಾಗಿ ಮೊದಲು ಬಂದವರು ತಮ್ಮ ಜಾಗವನ್ನು ಬಿಟ್ಟುಕೊಡಬೇಕಿತ್ತು. ಈಗಲೂ ಧರ್ಮಸ್ಥಳ ಮುಂತಾದ ಕಡೆಗಳಲ್ಲಿ ಮೂರು ದಿನಗಳಿಗಿಂತ ಹೆಚ್ಚು ಅಲ್ಲಿನ ಛತ್ರಗಳಲ್ಲಿ ಉಳಿಯುವಂತಿಲ್ಲ. ಇದರ ಅರ್ಥ, ಇರುವ ವ್ಯವಸ್ಥೆಯನ್ನು ಎಲ್ಲರಿಗೂ ದೊರೆಯುವಂತೆ ಮಾಡುವ ವಿಚಾರವನ್ನು ಹಿರಿಯರು ನಿರ್ಧರಿಸಿದ್ದಾರೆ ಎಂಬುದೇ ಆಗಿದೆ.

ಪಾರುಪತ್ಯದವನು ಎಂದರೆ ಮೇಲ್ವಿಚಾರಕ. ಛತ್ರದಲ್ಲಿ ನಮಗೆಷ್ಟು ಕಾಲ ಆಸರೆಯಿದೆಯೋ ಅಷ್ಟನ್ನು ಬಳಸಿಕೊಂಡು ನಾವು ಮುಂದೆ ಪ್ರಯಾಣ ಮಾಡಿ, ನಮ್ಮ ಹಿಂದೆ ಬಂದ ಯಾತ್ರಿಕರಿಗೆ ಅಲ್ಲಿ ತಂಗಲು ಅವಕಾಶ ನೀಡಬೇಕು. ವ್ಯವಸ್ಥಾಪಕರು ನಮ್ಮನ್ನು ದಬ್ಬುವ ಮೊದಲೇ ಅಲ್ಲಿಂದ ಹೊರಡುವುದು ಸೂಕ್ತ. ಇಂತಹ ಸರಳವಾದ ವಿಚಾರ ಮುಂದಿಟ್ಟುಕೊಂಡು ಕಗ್ಗವು ಮತ್ತೊಂದು ಅದ್ಭುತವಾದ ಸತ್ಯವನ್ನು ಪ್ರತಿಪಾದಿಸುತ್ತಿದೆ. ಈ ಲೋಕದಲ್ಲಿ ನಾವು ಯಾತ್ರಿಕರೇ, ಮೂರು ದಿನದ ಬಾಳನ್ನು ಬಾಳಿದ ಮೇಲೆ ಇದನ್ನು ಬಿಟ್ಟು ತೆರಳಲೇಬೇಕು. ಅವನು ಎಂದರೆ ಇಲ್ಲಿ ವಿಧಿ. ಅವನು ಹೇಳಿದ ಮೇಲೆ ಗಂಟುಮೂಟೆ ಕಟ್ಟಲೇ ಬೇಕು. ಒಂದು ವೇಳೆ ಕಟ್ಟದಿದ್ದರೆ, ಅವನು ಕಟ್ಟಿಸದೇ ಬಿಡನು. ಅವನು ಕರೆಯುವ ಮೊದಲೇ ನಾವು ಹೊರಡುವ ಸಿದ್ಧತೆ ಮಾಡಿಕೊಳಬೇಕೆಂಬ ಚಿಂತನೆ ಕಗ್ಗದಲ್ಲಿದೆ.

ಇದರ ಮೂಲಕ ಇನ್ನೊಂದು ಸತ್ಯದರ್ಶನವಾಗುತ್ತದೆ. ಆತ್ಮರೂಪಿ ಚೈತನ್ಯವು ದೇಹಧಾರಣೆ ಮಾಡಿ ಜಗದ ಬಯಲಿನಲ್ಲಿ ಪಲ್ಲವಿಸಿದ ಮೇಲೆ ಹಣ್ಣಾಗಿ ಮಣ್ಣುಸೇರಲೇಬೇಕು ಅಲ್ಲವೇ? ನಾವು ಪರರ ಮನೆಯಲ್ಲಿ ಎಷ್ಟು ದಿನ ಇರಲಾದೀತು. ನಿಜದ ಮನೆಯನ್ನು (ಮುಕ್ತಿ) ಸೇರುವ ಮುನ್ನ ತಾತ್ಕಾಲಿಕ ಆವಾಸ ಸ್ಥಾನಗಳನ್ನು ತೊರೆಯಲೇಬೇಕು. ಹುಟ್ಟಿದ ಮೇಲೆ ಸಾವನ್ನು ಸ್ವಾಗತಿಸಲೇಬೇಕು.

ತಿರಿದನ್ನವುಂಬಂಗೆ ಹುರುಡೇನು, ಹಟವೇನು | ತಿರುಪೆಯಿಡುವರು ಕುಪಿಸಿ ಬಿರುನುಡಿಯ ನುಡಿಯೆ || ದುರದುರನೆ ನೋಡಿ ನೀನೆದುರುನುಡಿ ನುಡಿಯುವುದೆ? I ಗರು...
24/05/2024

ತಿರಿದನ್ನವುಂಬಂಗೆ ಹುರುಡೇನು, ಹಟವೇನು |
ತಿರುಪೆಯಿಡುವರು ಕುಪಿಸಿ ಬಿರುನುಡಿಯ ನುಡಿಯೆ ||
ದುರದುರನೆ ನೋಡಿ ನೀನೆದುರುನುಡಿ ನುಡಿಯುವುದೆ? I
ಗರುವವೇತಕೆ ನಿನಗೆ? - ಮಂಕುತಿಮ್ಮ || ೬೭೧

ಬೇಡುವವನಿಗೆ ಆಡುವ ಅಧಿಕಾರವಿರದು. ಇದು ಕಗ್ಗದ ತಿರುಳು.
ತಿರುಪೆ ಎತ್ತಿ ಬದುಕುವ ಜನಕ್ಕೆ ಯಾರ ವಿರುದ್ಧವೂ ಹಠವಾಗಲೀ ಸ್ಪರ್ಧೆಯ ತುರುಸಾಗಲೀ ಇರಬಾರದು. ಭಿಕ್ಷೆ ನೀಡುವವರು ಬೈದು ಕೆಟ್ಟ ಮಾತುಗಳನ್ನಾಡಿದರೂ, ಬೇಡುವವನು ಎದುರಾಡುವಂತಿಲ್ಲ. ದೇಹಿ ಎನ್ನುವವನಿಗೆ ಅಹಮಿಕೆ ಇರಕೂಡದು ಎಂದು ಡಿವಿಜಿ ಬದುಕಿನ ಮತ್ತೊಂದು ಮಗ್ಗುಲಿನ ದರ್ಶನ ಮಾಡಿಸಿದ್ದಾರೆ.

ಬೇಡಿದಲ್ಲದೆ ಬಾಳು ಮುಗಿಯದು. ಈ ಜಗತ್ತಿನಲ್ಲಿ ಬೇಡದಿರುವ ವ್ಯಕ್ತಿ ಯಾರೂ ಇಲ್ಲ. ವಿಧಾನಗಳು ಬೇರೆ ಬೇರೆ ಅಷ್ಟೇ. ಉದಾಹರಣೆಗೆ ಹಸಿದವ ಅನ್ನವನ್ನು, ಬಾಯಾರಿದವ ನೀರನ್ನು, ವಿದ್ಯಾರ್ಥಿ ವಿದ್ಯೆಯನ್ನು, ಕನ್ಯಾರ್ಥಿ ಹೆಣ್ಣನ್ನು, ಹೀಗೆ ಹಣವನ್ನು, ಭೂಮಿ, ಅಧಿಕಾರ, ಅಂತಸ್ತು, ನೆಮ್ಮದಿ ಯಾವುದು ಆದರೂ ಸರಿಯೇ ಬೇಡುವುದು ತಪ್ಪದು. ಅಂದ ಮೇಲೆ ನಾವೆಲ್ಲರೂ ಭಿಕ್ಷುಕರೇ ಅಲ್ಲವೇ.

ಯಾವಾಗ ಕೇಳಿದ್ದು ಸಿಗಲಿಲ್ಲವೋ ನಮ್ಮ ಮನೋವಿಕಾರ ಹೆಚ್ಚಿ ಕೊಡದವರನ್ನು ಶಪಿಸುತ್ತೇವೆ. ಮತ್ತು ಬೇಡುವುದು ನಮ್ಮ ಹಕ್ಕು ಎಂದು ಕೊಂಡು ಬಿಡುತ್ತೇವೆ. ಬೇಡಿದ್ದು ಸಿಗದಿದ್ದರೆ ಭಗವಂತನಾದರೂ ಸರಿಯೇ, ಅವನ ನಿಂದನೆಗೆ ನಾವು ಸಿದ್ಧವಾಗಿ ಬಿಡುತ್ತೇವೆ. ಕೇಳಿದುದ ಕೊಡಲಾರದ ನೀನೇತರ ಕರುಣಾಶಾಲಿ, ಬಾಳಿಸದೆ ಬಾಡಿಸುವ ನೀ ಭಗವಂತನೆ ಹೇಳು ಎಂದು ಝಾಡಿಸಿಬಿಡುತ್ತೇವೆ. ಆದರೆ ನಮ್ಮ ವೈಫಲ್ಯಗಳಿಗೆ ನಾವೇ ಕಾರಣರೆಂಬ ಅಂಶವನ್ನು ಮರೆಯುತ್ತೇವೆ. ಅಂದರೆ, ನಮ್ಮಲ್ಲಿನ ಅರಿವಿನ ಅಭಾವವು ನಮ್ಮಿಂದ ಬಿರುನುಡಿಗಳನ್ನಾಡಿಸುತ್ತದೆ. ಎಲ್ಲಿ ಸಮರ್ಪಣಾ ಭಾವ ಇರುತ್ತದೆಯೋ ಅಲ್ಲಿ ಅಹಮಿಕೆಗೆ ಜಾಗವಿಲ್ಲ. ಬೇಡುವುದು ನಮ್ಮ ಕರ್ತವ್ಯವಾಗಬೇಕು ಕೊಡುವುದು ಕೊಡದಿರುವುದು ದಾನಿಯ ಇಚ್ಛೆ ಅಲ್ಲವೇ. ಆದ್ದರಿಂದ ತಿರುತಿರುಗಿ ತಿರುಪೆಯನು ಎತ್ತುವ ನಾವು ತಿರುಗಿ ನುಡಿಯಬಾರದು.

ಬರುವೆಲ್ಲ ಬೇನೆಗಂ ಮದ್ದನಾರಿರಿಸಿಹರು? |ನರರ ಕೀಳ್ತನಕೆಲ್ಲ ಪರಿಹಾರವೆಂತು? ||ಕಿರಿದು ಪಲ್ಲನು ತಾಳಿಕೊಳಲೆಬೇಕಷ್ಟಿಷ್ಟು |ಧರೆಯಂತರುಷ್ಣವನು - ಮಂ...
24/05/2024

ಬರುವೆಲ್ಲ ಬೇನೆಗಂ ಮದ್ದನಾರಿರಿಸಿಹರು? |
ನರರ ಕೀಳ್ತನಕೆಲ್ಲ ಪರಿಹಾರವೆಂತು? ||
ಕಿರಿದು ಪಲ್ಲನು ತಾಳಿಕೊಳಲೆಬೇಕಷ್ಟಿಷ್ಟು |
ಧರೆಯಂತರುಷ್ಣವನು - ಮಂಕುತಿಮ್ಮ || ೬೭೦

ಬೇನೆ ಎಂಬುದು ಎಲ್ಲರಿಗೂ ಇರುತ್ತದೆ. ಅದರಲ್ಲಿ ಹೊರಗಿನ ಮತ್ತು ಒಳಗಿನ ಬೇನೆಗಳೆಂದು ಎರಡು ವಿಧ. ಎರಡನ್ನೂ ಭರಿಸುವ ಶಕ್ತಿಯನ್ನು ನಾವು ಗಳಿಸಬೇಕು. ಅದೇ ಈ ಕಗ್ಗದ ಆಶಯ. ಮುಂದೆ ಎಂದೋ ರೋಗ ಬರುತ್ತದೆ ಎಂದು ಈಗಲೇ ಮದ್ದನ್ನು ತಯಾರಿಸುವುದಿಲ್ಲ. ಮನುಷ್ಯರ ಕೆಟ್ಟಬುದ್ಧಿಯ ಕೆಲಸಗಳಿಗೆ ಪರಿಹಾರ ಸಾಧ್ಯವೇ? ಮೇಲ್ನೋಟಕ್ಕೆ ಸಂತೋಷವನ್ನು ತೋರಿಸಿ ಬಂದುದನ್ನು ತಾಳಿಕೊಳ್ಳಲೇಬೇಕು, ಭೂಮಿ ಕಾವನ್ನು ಹೇಗೆ ಒಡಲಲ್ಲಿ ಇಟ್ಟು ಕೊಂಡಿದೆಯೋ ಹಾಗೆ.

ಕಾಯಿಲೆಗಳು ಮಾನವನನ್ನು ಅನಾದಿಕಾಲದಿಂದಲೂ ಕಾಡುತ್ತಾ ಬಂದಿವೆ. ಹಾಗೆಯೇ ಆ ಕಾಯಿಲೆಗಳಿಗೆ ಮದ್ದನ್ನು ಕಾಲದಿಂದ ಕಾಲಕ್ಕೆ ಕಂಡು ಹಿಡಿದು ರೋಗಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನವನ್ನು ಮಾಡಲಾಗುತ್ತಿದೆ. ಆದರೆ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಲೇ ಇದೆ ಅಲ್ಲವೇ. ದಿನಗಳೆದಂತೆ ಹೊಸ ಹೊಸ ಕಾಯಿಲೆಗಳ ಅವತಾರವಾಗುತ್ತಲೇ ಇದೆ. ಪ್ಲೇಗು, ಕಾಲರಾಗಳ ಕಾಲ ಮುಗಿದು ಕಂಡು ಕೇಳರಿಯದ ರೋಗಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಕಾಯಿಲೆಗಳು ಬಂದ ಮೇಲೆ ಅದರಿಂದ ತಪ್ಪಿಸಿಕೊಳ್ಳಲು ಉಪಾಯಗಳನ್ನು ಮಾಡುತ್ತಿದ್ದಾರೆ.

ಮನುಷ್ಯರೂ ಹಾಗೆಯೇ, ಬಹುತೇಕ ಇಂದಿನ ಎಲ್ಲ ಕಾಯಿಲೆಗಳಿಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಾವೇ ಕಾರಣರಾಗುತ್ತಿದ್ದೇವೆ. ನಮ್ಮ ನಡುವೆ ಇರುವ ರಾಕ್ಷಸೀ ಮನೋಭಾವದ ಜನಗಳು ಜಗದ ಬದುಕನ್ನೂ ಅದರೊಳಗಿನ ನೆಮ್ಮದಿಯನ್ನೂ ಹೈರಾಣಾಗಿಸುತ್ತಿದ್ದಾರೆ. ನಾವು ದುರ್ಜನರ ಕಂಡೊಡನೆ ಕರಮುಗಿದು ಶಿರಬಾಗು ಎಂಬ ಮಾತನ್ನು ನೆನೆಯುತ್ತಾ ಅವರ ಮುಂದೆ ಹಲ್ಲು ಕಿರಿಯುತ್ತಾ ಹೇಗೋ ಸಹಿಸಿಕೊಂಡು ಹೋಗುತ್ತಿದ್ದೇವೆ. ಭೂಮಿಯನ್ನು ಕ್ಷಮಯಾ ಧರಿತ್ರಿ ಎಂದು ಕರೆಯುತ್ತೇವೆ ಅಲ್ಲವೇ. ಹಾಗೆ ನಾವೂ ನಮಗಿಷ್ಟವಿಲ್ಲದಿದ್ದರೂ ಬಹಳಷ್ಟು ವಿಚಾರಗಳನ್ನು ಸಹಿಸಿಕೊಳ್ಳಲೇ ಬೇಕಾಗುತ್ತದೆ. ಇದು ಬಾಳಿನ ಅನಿವಾರ್ಯವೂ ಹೌದು. ಸಹಿಸುವ ಗುಣವಿಲ್ಲದಿರೆ ಕಲಿಸುವುದಾಗದು. ಸೋತಂತೆ ಇದ್ದು ಗೆಲುವಿನ ಹಾದಿಯೆಡೆ ನಡೆಯಬೇಕು. ಇಲ್ಲದಿರೆ ಬದುಕು ಹಸನಾಗದು.

23/05/2024

ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ |
ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ ||
ಈಗಲೊ ಆಗಲೋ ಎಂದೊ ಮುಗಿವುಂಟೆಂಬ |
ಭಾಗ್ಯವನು ನೆನೆದು ನಲಿ – ಮಂಕುತಿಮ್ಮ || ೬೬೯

ಜೀವನದಲ್ಲಿ ಕಾಲದ ಪಾತ್ರ ಬಹಳ ಮುಖ್ಯವಾದುದು. ಆರಂಭಕ್ಕೆ ಅಂತ್ಯವಿದ್ದೇ ಇದೆ. ಮೊನ್ನೆ ಮೊನ್ನೆ ಆರಂಭವಾದ ಹೊಸವರ್ಷ ಅರ್ಧ ಹಾದಿಯನ್ನು ಸವೆಸಿದೆ. ನಮ್ಮ ಅರಿವಿದ್ದರೂ, ಇಲ್ಲದಿದ್ದರೂ ಕಾಲ ನಿಲ್ಲದು; ಬದುಕೂ ನಿಲ್ಲದು. ಜೀವಿಯ ವಿಚಾರಕ್ಕೆ ಬರೋಣ. ಹಲವು ಜನ್ಮಗಳಲ್ಲಿ ಹಾದು ಬರುವ ಆತ್ಮರೂಪಿ ಜೀವಿಯು ಹಿಂದಿನ ಜನ್ಮದ ವಾಸನೆಯನ್ನು ಈ ಜನ್ಮದಲ್ಲಿ ಅರಿಯಲಾರ ಅಥವಾ ಈ ಜನ್ಮದ ವಿವರಗಳನ್ನು ಮುಂದಿನ ಜನ್ಮದಲ್ಲಿ ಕಾಣಲಾರ. ಆದರೆ ಪ್ರತೀ ಜನ್ಮವನ್ನೂ ಸವೆಸಲೇಬೇಕಾದ ಅನಿವಾರ್ಯತೆ ಜೀವಿಯದು. ಆದರೆ ಪ್ರತೀ ಜನ್ಮವೂ ಮುಗಿಯುತ್ತದೆ ಎನ್ನುವುದೇ ಸಮಾಧಾನ. ಪುಣ್ಯವೂ ಹೌದು.

ಎಷ್ಟೇ ಸುಂದರ ಬದುಕಾದರೂ ಸಾಕು ಎನಿಸುವುದೇ ಬಾಳಿನ ವೈಶಿಷ್ಟ್ಯ. ನಾವು ಬಯಸುವ ಮುನ್ನ ಮುಗಿವ ಜೀವನ, ನಾವು ಬಯಸದಿದ್ದರೂ ಮುಗಿವ ಜೀವನದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲಕ್ಕೂ ಒಂದು ದಿನ ಮುಕ್ತಾಯವಿದೆ ಎಂಬ ಅಂಶ ಜೀವಿಯ ಬಾಳಿನಲ್ಲಿ ಸಮಾಧಾನ ತರುತ್ತದೆ. (ಅವತಾರವೂ ಸಮಾಪ್ತಿಯಾಗುತ್ತದೆ ಅಲ್ಲವೆ) ಹಾಗೋ ಹೇಗೋ ಬಾಳುವುದಕಿಂತ, ನಾವು ಹೀಗೆಯೇ ಬಾಳೋಣವೆಂದು ನಿರ್ಧರಿಸಿ ಬಾಳಿದರೆ ಜೀವನ ಸಾರ್ಥಕವೂ, ಸುಂದರವೂ ಆದೀತು. ಅಂದರೆ ಸಾರ್ಥಕ ಬದುಕು ನಮ್ಮಿಂದ ಸಾಧ್ಯ ಎಂಬ ಸೂಕ್ಷ್ಮ ಸಂದೇಶ ಕಗ್ಗದಲ್ಲಿದೆ. ಆದ್ದರಿಂದ ಇರುವ ಬಾಳನ್ನು ಖುಷಿಯಿಂದ ಬಾಳೋಣ.

22/05/2024

ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ! |
ಮುಡಿಪವರ ಮನಸೆಲ್ಲ ಕೈಯ ದುಡಿತಕ್ಕೆ ॥
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು |
ಕಡಿದಲ್ಲವರ್ಗೆ ಬಾಳ್ - ಮಂಕುತಿಮ್ಮ || ೬೬೮

ಯೋಗ ಎಂದರೇನು? ಅದು ನಮ್ಮ ಜೀವನದಲ್ಲಿ ವಹಿಸುವ ಪಾತ್ರವೇನು? ಯೋಗಿ ಯಾರು? ಎಂಬ ಪ್ರಶ್ನೆಗಳನ್ನಿಟ್ಟು ಉತ್ತರ ಹೇಳುವಂತಿದೆ ಕಗ್ಗ. ಯೋಗವೆಂದರೆ ಅದೃಷ್ಟ, ತಪಸ್ಸು, ಸಾಧನೆ, ಒದಗಿ ಬಂದಿದ್ದು ಇತ್ಯಾದಿ ಅರ್ಥಗಳಿವೆ. ಅದನ್ನು ಸಾಧಿಸಿದವ, ಗಳಿಸಿದವ, ಅನಾಯಾಸವಾಗಿ ಪಡೆದುಕೊಂಡವ ಯೋಗಿ ಎನಿಸುತ್ತಾನೆ.

ಹಾಗಾದರೆ ಕಗ್ಗದ ಆಶಯ ಏನು? ಎಂದರೆ, ಒಂದು ಕೆಲಸವನ್ನು ತಪಸ್ಸಿನಂತೆ, ಶ್ರದ್ಧೆಯಿಂದ ಮಾಡುವುದೇ ಯೋಗ. ಅದನ್ನು ಮಾಡುವವರೇ ಯೋಗಿಗಳು (ಸಂನ್ಯಾಸಿಗಳೂ ಒಂದರ್ಥದಲ್ಲಿ ಯೋಗಿಗಳೇ). ಬಡಗಿ, ರೈತ, ಕುಂಬಾರ, ಕಮ್ಮಾರ, ಅಕ್ಕಸಾಲಿ ಮುಂತಾದ ಯಾರೇ ಆಗಿರಲಿ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೋ ಅವರನ್ನು ಯೋಗಿಗಳೆನ್ನಬಹುದು. ಅವರು ಸದಾಕಾಲ ತಮ್ಮ ಮನವನ್ನು ಕೇಂದ್ರೀಕರಿಸಿ ದುಡಿಯುತ್ತಾರೆ. ಹಾಗೂ ದುಡಿತದ ವೇಳೆಯಲ್ಲಿ ಯಾವುದೇ ಚಂಚಲತೆ ಇರುವುದಿಲ್ಲ. ವ್ಯರ್ಥವಾದ ಕಾಡುಹರಟೆ ಅಲ್ಲಿ ಕಾಣಿಸದು. ಅವರ ಆಹಾರವನ್ನು ಅವರೇ ದುಡಿದು ಉಣ್ಣುತ್ತಾರೆಯೇ ಹೊರತು, ಬೇರೆಯವರ ಹಂಗಿನಲ್ಲಿ ಊಟ ಮಾಡುವುದಿಲ್ಲ. ಹೀಗೆ ಯಾರು ತನ್ನ ದುಡಿಮೆಯಿಂದ ಆಹಾರವನ್ನು ದುಡಿದು ತಿನ್ನುತ್ತಾರೆಯೋ ಅವರಿಗೆ ಯಾರ ಹಂಗೂ ಇರದು.

ಕಾಯಕದಿಂದ ಬಂದ ಕೀರೆಯ ಸೊಪ್ಪಾದರೂ ಶಿವನಿಗೆ ಅರ್ಪಿತ ಎಂಬ ಶರಣರ ಮಾತು ಕಾಯಕದ ಮಹತ್ವವನ್ನು ತಿಳಿಸುವಂತೆ ಈ ಕಗ್ಗವು ಸಹಾ ದುಡಿಮೆಯ ಮಹತ್ತ್ವ ಮತ್ತು ಅವಶ್ಯಕತೆಯನ್ನು ತಿಳಿಸುತ್ತದೆ. ಇದೇ ಯೋಗ, ಇದೇ ಜೀವನದ ಸಾರ, ಸಾಕ್ಷಾತ್ಕಾರ. ದುಡಿದು ಬಾಳೋಣ.

21/05/2024

ಮನೆಯ ಸುಡುತಿಹ ಬೆಂಕಿಯುರಿಯನಾರಿಸೆ ನುಗ್ಗು |
ಮನವ ಸುಡುವುರಿಯಿಂದ ದೂರ ನೀಂ ನಿಲ್ಲು ||
ತನುವಿಗುಪಕೃತಿಗೆಯ್ವ ಭರದಿ ನೀನಾತುಮದ |
ಅನುನಯವ ಕೆಡಿಸದಿರು – ಮಂಕುತಿಮ್ಮ || ೬೬೭

ಮನೆ ಎನ್ನುವುದು ಒಂದು ನಿಲ್ದಾಣ. ಜೀವನದ ಯಾತ್ರೆಯಲ್ಲಿನ ತಂಗುದಾಣ. ಮನೆಯನ್ನು ಸುಡುವ ಬೆಂಕಿಯನ್ನು ಮೊದಲು ಆರಿಸಬೇಕು; ಮನವನ್ನು ಸುಡುವ ಬೆಂಕಿಯಿಂದ ದೂರ ಉಳಿಯಬೇಕು. ದೇಹದ ಆರೈಕೆ ಮಾಡುವ ಹುಮ್ಮಸ್ಸಿನಲ್ಲಿ ಆತ್ಮದ ನೆಮ್ಮದಿಯನ್ನು ಹಾಳು ಮಾಡಬಾರದು.

ಮನೆ ಎಂಬುದನ್ನು ಎರಡು ರೀತಿಯಲ್ಲಿ ಕಾಣಬಹುದು :

೧ ನಾವು ವಾಸಿಸುವ ಮನೆ, ೨ ನಾವೇ ಒಂದು ಮನೆ.

ಮಾನವ ಸಂಘ ಜೀವಿ ಇತರ ಪ್ರಾಣಿಗಿಂತ ಭಿನ್ನ. ಆದ್ದರಿಂದ ತನ್ನ ವಾಸಕ್ಕಾಗಿ ಮನೆ ಕಟ್ಟುವ ಕಾಯಕವನ್ನು ಮಾಡಿಕೊಂಡ. ಮಳೆ ಗಾಳಿ ಬಿಸಿಲುಗಳ ಹೊಡೆತದಿಂದ ತಪ್ಪಿಸಿಕೊಳ್ಳಲು ಅವನು ಆಶ್ರಯ ಪಡೆದಿದ್ದು ಮನೆಯಲ್ಲಿ. ಅಂತಹ ಮನೆಗೆ ಬೆಂಕಿ ಬಿದ್ದರೆ ತಕ್ಷಣ ಅದನ್ನು ಆರಿಸಲು ಪ್ರಯತ್ನ ಪಡುವುದು ಸಹಜ. ಇಲ್ಲದಿದ್ದರೆ ಬೀದಿ ಪಾಲಾಗಿ ಬಿಡುತ್ತಾನೆ.

ಎರಡನೆಯ ವಿಚಾರವು ಕರ್ಮ ಸಿದ್ಧಾಂತದ ತಳಹದಿ. ನಾವು ಎಂದರೆ ದೇಹ. ಅದರಲ್ಲಿ ಇರುವವನು ಆತ್ಮ. ಮನವನ್ನು ಸುಡುವುದು ಇಂದ್ರಿಯಗಳ ಲೋಲುಪತೆ. ಅದರಿಂದ ನಾವು ದೂರವಿರಬೇಕು. ಅಂದರೆ, ಮೊದಲ ಸಂದರ್ಭದಲ್ಲಿ ನಾವು ಬೆಂಕಿ ಎಂದರೆ ಆಪತ್ತನ್ನು ನಮ್ಮ ಕಡೆಗೆ ಬಾರದಂತೆ ತಡೆಯಬೇಕು. ಎರಡನೆಯ ಸನ್ನಿವೇಶದಲ್ಲಿ ನಾವು ಆಪತ್ತಿನ ಎಡೆಗೆ ಹೋಗಬಾರದು. ಇಂದ್ರಿಯ ಸೌಖ್ಯವನ್ನು ಬಯಸಿದರೆ ಆತ್ಮೋದ್ಧಾರ ಸಾಧ್ಯವಿಲ್ಲ.

ಮಹತ್ವಾಕಾಂಕ್ಷೆಯ ಬೆನ್ನೇರಿದವನಿಗೆ ಯಾವ ಸುಖವೂ ಬೇಕಾಗುವುದಿಲ್ಲ. ಅಂದರೆ ಇಂದ್ರಿಯಗಳನ್ನು ನಿಗ್ರಹಿಸದಿದ್ದರೆ ಅವು ಬಲಿತು ಅರಿಷಡ್ವರ್ಗಗಳು ಹೆಗಲೇರಿ ನಿಸ್ವಾರ್ಥತೆಯು ದೂರಾದೀತು. ಇಲ್ಲಿ ಆತ್ಮವನ್ನು ಅಂತಃಸಾಕ್ಷಿ ಎಂದೇ ಪರಿಗಣಿಸಿ. ನಮ್ಮ ಬಾಳಿನ ಹಾದಿಯನ್ನು ಅದಕ್ಕನುಸಾರವಾಗಿ ರೂಪಿಸಿಕೊಳ್ಳಬೇಕು. ಆತ್ಮಸಾಕ್ಷಿಯ ಪ್ರತೀಕವಾಗಿ ಬಾಳ್ವೆ ನಡೆಸಬೇಕು. ಸಮಾಜಮುಖಿ ಚಿಂತನೆಗಳಿಂದ ಆರೋಗ್ಯಕರ ಸಮಾಜ ನಿರ್ಮಿಸಬೇಕು. ಆ ಹಾದಿಯಲ್ಲಿ ಸಾಗೋಣ.

20/05/2024

ನೂರಾರು ಸರಕುಗಳು ಜೀವಿತದ ಸಂತೆಯಲಿ |
ಊರಿನವು, ಕೇರಿಯವು, ಮನೆಯವಾತ್ಮದವು ||
ಬೇರೆ ಬೇರೆ ಪುರುಳ್ಗೆ ಬೇರೆ ನೆಲೆ, ಬೇರೆ ಬೆಲೆ |
ತಾರತಮ್ಯವೆ ತತ್ತ್ವ - ಮಂಕುತಿಮ್ಮ || ೬೬೬

ಪುರುಳ್ = ವಸ್ತು.

ಆಧುನಿಕ ಜಗತ್ತಿನ ವಿಪರ್ಯಾಸವೆಂದರೆ ಯಾವುದಕ್ಕೆ ಯಾವಾಗ ಎಷ್ಟು ಬೆಲೆ ಕೊಡಬೇಕೆಂಬ ಸಾಮಾನ್ಯ ಜ್ಞಾನ ಇಲ್ಲದಿರುವುದು ಮತ್ತು ಯಾವುದನ್ನು ಎಲ್ಲಿಡಬೇಕೆಂಬ ಪರಿಜ್ಞಾನದ ಕೊರತೆಯಿರುವುದು. ಉದಾಹರಣೆಗೆ ಕಾಲಿಗೆ ತೊಡುವ ಚಪ್ಪಲಿಗಳನ್ನೂ, ಷೂಗಳನ್ನೂ, ಶೋಕೇಸಿನಲ್ಲಿ ಇಟ್ಟು ಮಾರುತ್ತೇವೆ. ಆದರೆ ನಾವು ತಿನ್ನುವ ತರಕಾರಿಗಳನ್ನು ನೆಲದ ಮೇಲೆ ಮಣ್ಣಾಗುವಂತೆ ಇಟ್ಟು ಮಾರುತ್ತೇವೆ. ಈ ಬಗೆಯ ಕಾಳಜಿಯ ಬಗ್ಗೆ ಮತ್ತೊಮ್ಮೆ ಚಿಂತಿಸಬೇಕಾಗಿದೆ. ಜೀವನವನ್ನೇ ಸಂತೆ ಎಂದುಕೊಂಡರೆ ಅದರಲ್ಲಿರುವ ಎಲ್ಲ ವಸ್ತುಗಳೂ ಇಲ್ಲಿಯವೇ. ಅದಕ್ಕೆ ನಾವು ಕೊಡಬೇಕಾದ ಮಾನ್ಯತೆಯನ್ನು ನಾವೇ ನಿರ್ಧರಿಸಬೇಕು. ಇಲ್ಲಿನ ವಸ್ತುಗಳು ಊರಿನವು, ಕೇರಿ, ಮನೆ ಮತ್ತು ಆತ್ಮಕ್ಕೆ ಸಂಬಂಧಿಸಿದವು ಇರಬಹುದು. ಅವುಗಳು ಯಾವುದೇ ಇರಲಿ, ಬೇರೆ ಬೇರೆ ಸರಕುಗಳಿಗೆ ಬೆಲೆಯೂ ಬೇರೆ ಬೇರೆ. ತಾರತಮ್ಯವೇ ತತ್ತ್ವವಾಗಬೇಕು.

ನನಗೆ ಬಾಲ್ಯದಲ್ಲಿ ಕೇಳಿದ ನೀತಿ ನೆನಪಾಗುತ್ತಿದೆ. ಮನೆಗಾಗಿ ವ್ಯಕ್ತಿಯನ್ನು, ಊರಿಗಾಗಿ ಮನೆಯನ್ನು, ರಾಜ್ಯಕ್ಕಾಗಿ ಊರನ್ನೂ, ದೇಶಕ್ಕಾಗಿ ರಾಜ್ಯವನ್ನು ತ್ಯಾಗ ಮಾಡಬೇಕು. ಇಲ್ಲಿ ಎಲ್ಲಕ್ಕೂ ಬೆಲೆ ಇದೆ ಆದರೆ, ಯಾವಾಗ ಯಾವುದಕ್ಕೆ ಬೆಲೆ ನೀಡಬೇಕು ಎಂಬುದನ್ನು ಮೇಲಿನ ಪ್ರಸಂಗ ತಿಳಿಸುತ್ತದೆ. ನಮ್ಮ ಮನೋನಿರ್ಧಾರಗಳು, ವಸ್ತು ವ್ಯಕ್ತಿಗಳ ಸಾರ ಸತ್ವಗಳನ್ನು ಅರಿಯುವ ಮತ್ತು ಅದನ್ನು ಅರಿತುಕೊಳ್ಳುವ. ಹಾಗೂ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಕಾಯಕ ನಮ್ಮದಾಗಲಿ.

18/05/2024

ತನುವ ತಣಿಸುವ ತುತ್ತು ಮನಕೆ ನಂಜಾದೀತು |
ಮನಮೋಹ ಜೀವಕ್ಕೆ ಗಾಳವಾದೀತು ||
ಅನುಭವದ ಪರಿಣಾಮವೊಂದರಿಂದೊಂದಕ್ಕೆ |
ಗಣಿಸಾತ್ಮಲಾಭವನು - ಮಂಕುತಿಮ್ಮ || ೬೬೫

ಲಾಭ ಎಂದರೇನು? ನಾವು ಯಾವುದಕ್ಕೆ ಎಷ್ಟು ಶ್ರಮ ಹಾಕಿರುತ್ತೇವೆಯೋ ಅದಕ್ಕಿಂತ ಪ್ರತಿಫಲ ಜಾಸ್ತಿಯಾದರೆ ಆ ಹೆಚ್ಚಿನ ಭಾಗವನ್ನು ಲಾಭ ಎನ್ನಬಹುದು. ಆತ್ಮ ಲಾಭ ಎಂದರೇನು? ಆತ್ಮವು ಒಂದು ವಾಹಿನಿ. ಅದು ಹಲವು ಜನ್ಮಗಳಲ್ಲಿ ಹಾದು ಮುಕ್ತಿ ಪಥವನ್ನು ತಲುಪುತ್ತದೆ. ಅದು ತನ್ನ ಹಾದಿಯಲ್ಲಿ ಮುಂದುವರೆಯಲು ಕಾರಣವಾಗುವ ಅಂಶಗಳೇ ಆತ್ಮಲಾಭ.

ಆತ್ಮಾರ್ಥಕ ಎಂದರೆ ತಾನು. ಇಲ್ಲಿ ನನಗೆ ಮತ್ತು ತನಗೆ ಎಂದು ಎರಡು ವಿಧ. ನನಗೆ ಎಂದರೆ ಯಾವ ಮೂಲದಿಂದ ಹೇಗಾದರೂ ಬರುವ ಲಾಭ. ತನಗೆ ಎಂದರೆ ಸರಿಯಾದ ಮಾರ್ಗದಲ್ಲಿ ಗಳಿಸಿದ ಲಾಭ, ಅಂದರೆ ಲೋಭವಿಲ್ಲದ್ದು.

ಈಗ ಕಗ್ಗ ಸುಲಭವಾಗಿ ಅರ್ಥಕ್ಕೆ ಸಿಗುತ್ತದೆ. ನಮ್ಮ ದೇಹದ ಮತ್ತು ನಾಲಗೆಗೆ ಇಷ್ಟವಾಗುವ ವಸ್ತುಗಳು ಮನಕ್ಕೆ ಕಷ್ಟವಾಗಬಹುದು. ಮನಸಿಗೆ ಆನಂದ ಕೊಡುವ ವಿಚಾರಗಳು ಜೀವಕ್ಕೆ ಸಂಚಕಾರ ತರಬಹುದು. ಹೀಗೆ ಉಂಟಾಗುವ ಅನುಭವದ ಪರಿಣಾಮಗಳು ಒಂದರಿಂದ ಇನ್ನೊಂದಕ್ಕೆ ಭಿನ್ನವಾಗುತ್ತಾ ಹೋಗುತ್ತದೆ. ಆದ್ದರಿಂದ ನಾವು ನಮಗಾಗುವ ಆತ್ಮಲಾಭದ ಬಗ್ಗೆ ಚಿಂತಿಸಿ ಅಳವಡಿಸಿಕೊಳ್ಳಬೇಕು.

ಬಸವಣ್ಣ ಒಂದೆಡೆ ಹೀಗೆ ಹೇಳುತ್ತಾರೆ, ಆದ್ಯರ (ಶಿವಶರಣರ) ವಚನಗಳು ಅಧರಕ್ಕೆ ಕಹಿ ಉದರಕ್ಕೆ ಸಿಹಿ. ಮನುಷ್ಯ ನಾಲಗೆಯ ರುಚಿಗಾಗಿ ತಿನ್ನುವ ಫಾಸ್ಟ್ ಪುಡ್ ಗಳು ದೇಹಾರೋಗ್ಯ ಕೆಡಿಸುತ್ತವೆ. ಹಾಗೆಯೇ, ದೇಹಕ್ಕೆ ವಿರಾಮ ಸಿಗಲಿ ಎಂದರೆ ಬೊಜ್ಜು ಬೆಳೆದು ಹಾಳಾಗುತ್ತೇವೆ. ಕಣ್ಣಿಗೆ ಇಷ್ಟವೆಂದು ಕಂಡದ್ದನ್ನೆಲ್ಲಾ ಬಯಸಿದರೆ ಪಡೆಯಲಾಗದೇ ಪ್ರಾಣ ಬಿಡಬೇಕಾದೀತು. ಒಂದೊಂದು ಅನುಭವದ ಫಲಿತಾಂಶವು ಭಿನ್ನವಾಗಿ ನಮ್ಮ ಜೀವನದ ಮೇಲೆ ಅಡ್ಡ ಪರಿಣಾಮ ಉಂಟುಮಾಡುತ್ತವೆ. ಆದ್ದರಿಂದ ಚತುರ್ವಿಧ ಪುರುಷಾರ್ಥಗಳಾದ ಧರ್ಮ ಅರ್ಥ ಕಾಮ ಮೋಕ್ಷಗಳತ್ತ ನಮ್ಮ ಗಮನ ಹರಿಸಿ ಸಾರ್ಥಕ ಬದುಕನ್ನು ಬಾಳೋಣ.

18/05/2024

ನರನೊಂದುವೆವಹಾರಕೆರಡಾಯವೆಯ ಲೆಕ್ಕ |
ಹೊರಗಣನುಭೋಗಕೊಂದೊಳನೀತಿಗೊಂದು ||
ವರಮಾನ ದೇಹಕಾದೊಡೆ ಮಾನಸಕದೇನು? |
ಪರಿಕಿಸಾ ಲೆಕ್ಕವನು - ಮಂಕುತಿಮ್ಮ || ೬೬೪

ಪ್ರತೀ ಕೆಲಸವೂ ಒಳಿತು ಕೆಡುಕುಗಳ ಮಿಶ್ರಣವೇ, ಅದರಿಂದ ಆದಾಯವೂ, ಖರ್ಚೂ ಇರುತ್ತದೆ. ಆ ಆಯವ್ಯಯದ ಲೆಕ್ಕಾಚಾರ ಮಾತ್ರ ವಿಭಿನ್ನವಾಗಿರುತ್ತದೆ. ದೇಶದ ವ್ಯವಹಾರಕ್ಕೆ ಬಜೆಟ್ ಇರುವಂತೆ ದೇಹದ ವ್ಯವಹಾರವೂ ಬಜೆಟ್ ಅನ್ನು ಬೇಡುತ್ತದೆ. ತಿನ್ನುವ ಊಟ, ನೋಡುವ ನೋಟ, ಜೊತೆಯ ಬೇಟ, ಕೂಡುವ ಕೂಟ ಎಲ್ಲವೂ ವ್ಯಯದ ಮೂಲವೇ. ಆದರೆ, ಅದರಿಂದ ಬಂದ ಆದಾಯ ಏನು ಎಂದರೆ ದೇಹಕ್ಕೆ ತೃಪ್ತಿ, ಮನಕೆ ಆನಂದ, ಅವರ್ಣನೀಯ ಮಿಲನ, ಅಪರಿಮಿತ ಸಂತಸ. ದೇಹದ ತೃಪ್ತಿಯನ್ನು ಮೀರಿದ್ದು ಮನದ ಸಂತಸ.

ಉಂಡ ಊಟವು ಕ್ಷಣಿಕವಾಗಿ ಸಂತಸ ಪಡಿಸಿದರೆ, ಅದರಿಂದುಂಟಾದ ಮನದಾನಂದದ ಅನುಭೂತಿ ಬಹು ಕಾಲ ಜೊತೆಗಿರುತ್ತದೆ. ಬಾಹ್ಯ ತೃಪ್ತಿ ಕಾಣಿಸಿದರೆ, ಆಂತರಿಕ ಸಮಾಧಾನ ಕಾಣಿಸದು. ಪಡೆದಾಗ ಉಂಟಾಗುವ ಧನ್ಯತಾ ಭಾವ ಕೊಡುವಾಗ ಸಿಗುವ ಸಾರ್ಥಕತೆಗೆ ಬೆಲೆ ಕಟ್ಟಲಾಗದು. ದೈಹಿಕ ಸಮಾಧಾನವು ಆಯಾ ಸಂದರ್ಭಗಳ ಕೂಸು. ಮಾನಸಿಕ ನೆಮ್ಮದಿಯು ಜೀವನದ ಪಾಸು. ಆದ್ದರಿಂದ ಲೆಕ್ಕವಿಡುವಾಗ ಈ ಮೇಲಿನ ಅಂಶಗಳನ್ನು ಪರಿಶೀಲಿಸಬೆಕಾಗುತ್ತದೆ. (ಮಾನವನ ಇಬ್ಬಗೆಯ ಲೆಕ್ಕವನ್ನು ವ್ಯಂಗ್ಯ ಮಾಡುವ ಲಕ್ಷಣವೂ ಇದೆ. ರಾಮ-ಕೃಷ್ಣರ ಲೆಕ್ಕದಂತೆ.)

17/05/2024

ಎರಡುತೆರ ಮೌಲ್ಯಂಗಳೆಲ್ಲಕಂ ಲೋಕದಲಿ |
ಪರಮಾರ್ಥಕೊಂದು, ಸಾಂಪ್ರತದರ್ಥಕೊಂದು ||
ಪರಿಕಿಸೆರಡಂ ನೀನು; ಹೊರಬೆಲೆಯ ಗುಣಿಪಂದು ।
ಮರೆಯಬೇಡೊಳಬೆಲೆಯ - ಮಂಕುತಿಮ್ಮ || ೬೬೩

ಜಗದ ವ್ಯಾಪಾರವು ಅತಿ ಸೂಕ್ಷ್ಮವಾದುದು. ನಾಣ್ಯಕ್ಕೆ ಎರಡು ಮುಖವಿರುವಂತೆ, ಪ್ರತೀ ವಿಚಾರಕ್ಕೆ ಎರಡು ಮೌಲ್ಯಗಳೂ, ಪ್ರತೀ ವಿಷಯಕ್ಕೆ ಎರಡು ಅರ್ಥಗಳೂ ಇರುತ್ತವೆ. ಲೋಕವ್ಯವಹಾರದ ಅರ್ಥ ಒಂದಾದರೆ, ಪಾರಮಾರ್ಥಿಕ ಅರ್ಥ ಮತ್ತೊಂದು ಆಗಿರುತ್ತದೆ. ಮೌಲ್ಯವೆಂದರೆ ಒಂದು ವಸ್ತು, ವ್ಯಕ್ತಿ, ವಿಚಾರದ ಬೆಲೆ. ಹಾಗಾದರೆ ಇದು ಕೊಂಡು ಕೊಳ್ಳುವ ವಿಚಾರವೇ? ಎಂದರೆ ಅಲ್ಲ. ಅದನ್ನು ನಿರ್ಣಯಿಸುವ ವಿಚಾರ. ಸರಳವಾಗಿ ವಸ್ತ್ರ ಧರಿಸಿದ ಮಾತ್ರಕ್ಕೆ ಬಡವನಲ್ಲ. ಅವನ ಗುಣಗಳು ಅವನ ಗೌರವವನ್ನು ಹೆಚ್ಚಿಸುತ್ತವೆ. ಪ್ರಾರ್ಥಿಸುವ ನೂರು ಕೈಗಳ ಮೌಲ್ಯವು ಸಹಾಯಕ್ಕೆ ಚಾಚಿದ ಎರಡು ಕೈಗಳ ಮುಂದೆ ಸೋಲುತ್ತದೆ. ಅಂತರಂಗ ಬಹಿರಂಗಗಳ ತಾಕಲಾಟದಲಿ ಅಂತರಂಗದ ವ್ಯಾಪ್ತಿ ಬಹಳ ಮುಖ್ಯವಾಗುತ್ತದೆ. ಮೇಲ್ನೋಟದಿಂದ ಯಾರನ್ನೂ ಅಳೆಯಲಾಗದು. ಬದಲಿಗೆ ಅವರವರ ಆಂತರ್ಯವನ್ನು ಎಣಿಸ ಬೇಕಾದೀತು.

ಇದೇ ನಿಜವಾದ ಅಳತೆಗೋಲು. ಆದರೆ ಇದನ್ನು ಅರಿವ ಬಗೆ ಹೇಗೆ? ರಾಜ ನರ್ತಕಿಯ ಪಾಡು ನೋಡೋಣ. ಆಕೆಗೆ ಏನೇ ಆಗಿರಲಿ, ಅವಳು ರಾಜ ಬಯಸಿದ ತಕ್ಷಣ ನರ್ತಿಸಲೇ ಬೇಕಲ್ಲವೇ? ಅವಳ ಭಾವಗಳಿಗೆ ಅಲ್ಲಿ ಬೆಲೆಯಿರದು. ಅಲ್ಲಿ ಅವಳ ಕುಣಿತಕ್ಕೆ ಬೆಲೆಕೊಡದೆ ಅದರ ಹಿಂದಿನ ಗೌರವದ ಕೆಲಸಕ್ಕೆ ಬೆಲೆ ಕೊಡಬೇಕು. ಪ್ರತಿದಿನ ಪ್ರೀತಿಸುವ ತಂದೆ, ತಾಯಿ, ಮಿತ್ರ ಇತ್ಯಾದಿಗಳು ಈಗ ರೇಗುತ್ತಿದ್ದರೆ, ಅದರ ಹಿಂದಿನ ಕಾಳಜಿ ಗಮನಿಸಬೇಕು. ಹಾಗಾಗಿ ಒಳ ಬೆಲೆಯು ಹೊರಬೆಲೆಗಿಂತ ಸದಾ ಮೌಲ್ಯಯುತವಾಗಿರುತ್ತದೆ. ಅರಿತು ಬಾಳೋಣ.

16/05/2024

ಖದ್ಯೋತನಂತೆ ಬಿಡುಗೊಳದೆ ಧರ್ಮವ ಚರಿಸು |
ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು ||
ಗೆದ್ದುದೇನೆಂದು ಕೇಳದೆ, ನಿನ್ನ ಕೈಮೀರೆ |
ಸದ್ದುಮಾಡದೆ ಮುಡುಗು - ಮಂಕುತಿಮ್ಮ || ೬೬೨

ಖದ್ಯೋತ = ಸೂರ್ಯ ; ವಿದ್ಯುತ್ = ಮಿಂಚು ; ಮುಡುಗು = ಶರಣಾಗು.

ರವಿಯ ಹಾಗೆ ದಿನ ನಿತ್ಯ ಕರ್ಮ ಮಾರ್ಗದಲ್ಲಿ ಧರ್ಮದಿಂದ ನಡೆ, ಮಿಂಚಿನ ಹಾಗೆ ಬೆಳಕನ್ನು ಸೂಸು, ನಿನ್ನ ಗೆಲುವೇನೆಂದು ಬೀಗಬೇಡ, ಪರಿಸ್ಥಿತಿ ಕೈ ಮೀರಿದರೆ ಮೌನದಲ್ಲಿ ದೈವಕ್ಕೆ ಶರಣಾಗು. ಮನುಷ್ಯನ ಬದುಕನ್ನು ಎಷ್ಟೊಂದು ಸರಳವಾಗಿ ಹೇಳಿದ್ದಾರೆಂದರೆ ಓದುವ ಮನವು ಆರ್ದ್ರವಾಗದೇ ಇರದು. ಗುಣವು ಪ್ರತಿಯೊಬ್ಬ ವ್ಯಕ್ತಿ ಪ್ರಾಣಿಗಳಲ್ಲೂ ಇರುವ ವಿಶಿಷ್ಟವಾದ ವಿಚಾರವಾಗಿದೆ. ಕ್ರೂರತೆ ಹುಲಿಯ ಗುಣ, ಸಾಧುತ್ವ ಗೋವಿನ ಗುಣ, ಬೆಲ್ಲ ಸಿಹಿ ಬೇವು ಕಹಿ, ನರಿ ಕುತಂತ್ರಿ, ಚಿಗರೆ ಚಂಚಲೆ.

ಮಾನವನ ಮೊದಲ ಗುಣವೇ ಮಾನವೀಯತೆ. ಆದರೆ ಅವನಲ್ಲಿ ಅದೇ ಇಲ್ಲದಿರುವುದು ವಿಪರ್ಯಾಸ. ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿ ವಾಣಿಯ ಕರೆ ಇದನ್ನು ಪ್ರತಿಬಿಂಬಿಸುತ್ತದೆ.

ನಿಷ್ಕಾಮ ಕರ್ಮವು ನಮ್ಮ ಬಾಳಿನ ಉಸಿರಾಗಬೇಕು. ಕರ್ತವ್ಯ ಮಾನವಗೆ ಮತ್ತೊಂದು ಹೆಸರಾಗಬೇಕು. ಸೂರ್ಯ ಯಾರ ಸ್ತುತಿ ನಿಂದೆಗಳ ಗಮನಿಸದೆ, ತನ್ನ ಪಾಡಿಗೆ ತಾನು ನಿತ್ಯ ಪಥದಲ್ಲಿ ಸಂಚರಿಸಿ ಸೃಷ್ಟಿಯ ಹೃದಯಕ್ಕೆ ಪ್ರಾಣಾಗ್ನಿಯ ಹೊಳೆಯನ್ನೇ ಹರಿಸುತ್ತಾನೆ. ವಿದ್ಯುಲ್ಲತೆಯು (ಮಿಂಚು, ಮಿಂಚಿನ ಬಳ್ಳಿ) ಕತ್ತಲ ಸಾಮ್ರಾಜ್ಯದಲ್ಲಿ ಬೆಳಕಿನ ಹಾದಿಯನ್ನು ನಿರ್ಮಿಸುತ್ತದೆ. ಒಂದು ದೀರ್ಘ, ಮತ್ತೊಂದು ಕ್ಷಣಿಕ. ಆದರೆ ಎರಡರ ಕೆಲಸವೂ ಮಾರ್ಗದರ್ಶನವೇ. ತಮ್ಮ ಪಾಡಿಗೆ ತಾವು ಕರ್ತವ್ಯ ನಿರ್ವಹಿಸಿ ಜಗಕೆ ಉಪಕರಿಸುತ್ತವೆ. ಆದರೆ ಮಾನವರಲ್ಲಿ ತಾನು ತನ್ನದೆಂಬ ಆತ್ಮಾರ್ಥಕವು ಅತಿಯಾಗಿ ತನ್ನ ಮೇಲಿನ ಮಮತೆ, ಅಭಿಮಾನವು ಅಹಂಕಾರವಾಗಿ ವಿಜೃಂಭಿಸಿ ಮಾನವತೆ ಮರೆಯಾಗಿ ಮೃಗೀಯ ಭಾವ ಉದ್ಭವಿಸಿ ಬಿಡುತ್ತದೆ. ಅದನ್ನು ದೂರಾಗಿಸಿ ಸಮರ್ಪಣಾ ಭಾವದಲ್ಲಿ ನೀ ಗೆದ್ದೆನೆಂಬ ಭಾವ ತ್ಯಜಿಸಿ ಸಾರ್ಥಕತೆಯ ಭಾವ ಹೊಂದಿದಾಗ ಬಾಳು ಧನ್ಯವಾದೀತು. ಒಂದು ವೇಳೆ ಸಮಯ ಸಂದರ್ಭಗಳು ಕೈ ಮೀರಿದಾಗ ಮೌನದಲ್ಲಿ ಭಗವಂತನಿಗೆ, ಸಮಾಜಕ್ಕೆ, ತಲೆಬಾಗಬೇಕೇ ಹೊರತು ವಿಧ್ವಂಸಕರಾಗಬಾರದೆಂಬ ಆಶಯವನ್ನು ಕಗ್ಗವು ಪ್ರಸಾದಿಸುತ್ತದೆ.

15/05/2024

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ |
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ||
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ || ೬೬೧

ಜಗದೊಳಿತಿನ ಯಾವ ಕೆಲಸಗಳೂ ಗದ್ದಲವುಂಟು ಮಾಡುವುದೇ ಇಲ್ಲ. ಆದರೆ ಅಲ್ಪ ಜೀವಿಯಾದ ಮಾನವ ಮಾತ್ರ ತಾನು ಮಾಡುವ ಎಲ್ಲಾ ಕೆಲಸಗಳು ಎಲ್ಲರಿಗೂ ತಿಳಿಯಲೆಂದು ಡಂಗುರ ಹೊಡೆಯುತ್ತಾನೆ. ಬೀಜವೊಂದು ಭೂಗರ್ಭದಿಂದ ಮಣ್ಣಿನ ಮೇಲ್ಪದರವನ್ನು ಸೀಳಿ ಬರುವಾಗಲೂ ಯಾವುದೇ ಸದ್ದು ಮಾಡದು. ಮರದ ಮೇಲಿನ ಕಸುಗಾಯಿ ಮಾಗಿ ಹಣ್ಣಾಗುವಾಗಲೂ ಸದ್ದಾಗದು. ಹಗಲಿರುಳು ಸತತವಾಗಿ ಬೆಳಕೀವ ರವಿ ಶಶಿಯರೂ ಸಪ್ಪಳ ಮಾಡರು. ಇನ್ನು ಮಾನವನದು ಯಾವ ಲೆಕ್ಕ? ನಿನ್ನ ತುಟಿ ಹೊಲಿದುಕೋ, ಎಂದರೆ ನಿನಗೆ ನೀನೇ ಬಹುಪರಾಕು ಹೇಳಿಕೊಳ್ಳಬೇಡ. ಎನ್ನುತ್ತದೆ ಕಗ್ಗ. ಇದು ಕರ್ಮ ಸಿದ್ದಾಂತದ ಮತ್ತೊಂದು ಪದ್ಯ.

ಮಾಗುವ ಮುನ್ನ ಬಾಗಬೇಕು. ಸಿಗ್ಗಿಲ್ಲದೇ ಸನ್ಮಾರ್ಗದಿ ಸಾಗಬೇಕು. ಎಲ್ಲಿ ಸಮರ್ಪಣೆಯಿರುತ್ತದೋ ಅಲ್ಲಿ ಅಹಂಕಾರವಿರದು. ಎಲ್ಲಿ ಸೋಗಲಾಡಿತನ ವಿರುತ್ತದೋ ಅಲ್ಲಿ ಮುಗ್ಧತೆಯಿರದು. ನಮ್ಮ ಬಾಳು ವನಸುಮದ ರೀತಿಯಲ್ಲಿ ಇರಬೇಕು. ಅಲ್ಲದೇ ಫಲ ಬಯಸದ ಕಾರ್ಯ ನಮ್ಮದಾಗಬೇಕು. ಈ ಬಾಳು ತನ್ನ ಪಾಡಿಗೆ ತಾನು ಸಾಗುತ್ತದೆ. ನಾವು ಬಿಟ್ಟರೂ ಬಾಳು ಬಾಳದೇ ಬಿಡದು ಎಂದ ಮೇಲೆ ಬದುಕಿನ ಪ್ರತಿಯೊಂದೂ ನಿಯತಿಯ ಸುಪರ್ದಿಗೆ ಒಳಪಟ್ಟು ತೀರಲೇಬೇಕು. ನಾ ಮಾಡಿದೆ ಎನ್ನುವುದಕಿಂತಲೂ ಜಗವು ನನ್ನಿಂದ ಮಾಡಿಸಿಕೊಂಡಿತು ಎನ್ನುವುದರಲ್ಲಿ ಹೆಚ್ಚಿನ ಆನಂದವಿದೆ. ಅಹಮಿಕೆಯ ಬಡಾಯಿ ಬಾಯನ್ನು ಮುಚ್ಚಿಸಿ ಕರ್ತವ್ಯವನ್ನು ನಿರ್ವಹಿಸಿದರೆ ಬದುಕು ನಿರಾಳವಾದೀತು.

14/05/2024

ಗರುವಭಂಗವನಾಗಿಸಿದನು ಗರುಡಂಗೆ ಹರಿ |
ಮುರಿಯಿಸಿದನಂತೆ ಫಲುಗುಣನ ಹೆಮ್ಮೆಯನು ||
ಕರುಬುವಿಧಿಸೈರಿಸನು ದರ್ಪವನದಾರೊಳಂ |
ಶಿರವ ಬಾಗಿಹುದೆ ಸಿರಿ - ಮಂಕುತಿಮ್ಮ || ೬೬೦

ವಿನಯವು ಪರಾಕ್ರಮಿಯ ಗೌರವವನ್ನು ಹೆಚ್ಚಿಸುತ್ತದೆ. ಪುರುಷತ್ವದ ಪ್ರತೀಕವಾದ ವೀರತನವು ಮಿತಿ ಮೀರಿದರೆ ಅದು ದರ್ಪವೆನಿಸಿ ವಿಧಿಯ ಕೆಂಗಣ್ಣಿಗೆ ಗುರಿಯಾಗಿ ಅಧಃಪತನ ಹೊಂದಬೇಕಾಗುತ್ತದೆ. ಅದಕ್ಕೆ ಕೊಡುವ ಎರಡು ದೃಷ್ಟಾಂತಗಳು ಅದ್ಭುತವಾದವು. ಗರುಡ ಮತ್ತು ಅರ್ಜುನನ ಗರ್ವಭಂಗಗಳು.

ಕಶ್ಯಪ ಋಷಿಯ ಇಬ್ಬರು ಪತ್ನಿಯರು ವಿನತೆ ಮತ್ತು ಕದ್ರು. ವಿನತೆಯ ಮಗ ಗರುಡ (ವೈನತೇಯ). ಕದ್ರುವಿನ ಮಕ್ಕಳು ನಾಗಗಳು. ಕಾರಣಾಂತರಗಳಿಂದ ವಿನತೆ ಕದ್ರುವಿನ ದಾಸಿಯಾಗಿದ್ದಳು. ದಾಸ್ಯತ್ವ ವಿಮೋಚನೆಯ ಸಲುವಾಗಿ ಗರುಡ ದೇವಲೋಕದಿಂದ ಅಮೃತಕಳಶವನ್ನು ತರಬೇಕಾಯಿತು. ಅಂತಹ ಬಲಶಾಲಿಯಾದ ಗರುಡನ ಅಹಮಿಕೆಯು ಮಿತಿ ಮೀರಿದಾಗ ಮಹಾವಿಷ್ಣುವು ಗರುಡನ ಮೇಲೆ ತನ್ನ ಬಲತೋಳಿನ ಭಾರವನ್ನು ಇರಿಸಿ ಗರುಡನ ಶಕ್ತಿಯುಡುಗಿಸಿ ಗರ್ವವನ್ನು ಭಂಗಿಸಿದನು.

ಅರ್ಜುನನು ಕುರುಕ್ಷೇತ್ರದಲ್ಲಿ ತಾನೇ ಬಿಲ್ಜಾಣನೆಂದೂ, ತನಗೆ ಸರಿ ಸಾಟಿ ಯಾರೂ ಇಲ್ಲವೆಂದು ಹಮ್ಮು ತೋರಿಸಿದಾಗ, ಅರ್ಜುನನನ್ನು ರಥದಿಂದ ಇಳಿಸಿ ಕೃಷ್ಣ ರಥವನಿಳಿದು ಹನುಮನೂ ಧ್ವಜವನ್ನು ಬಿಡಲು ಇಡೀ ರಥವೆ ಹೊತ್ತಿ ಉರಿಯಿತು. ಕರ್ಣನ ಸರ್ಪಾಸ್ತ್ರ ಪ್ರಯೋಗದ ಸಂದರ್ಭದಲ್ಲಿ ಕೃಷ್ಣನು ರಥವನ್ನು ಮೆಟ್ಟಲು, ರಥವು ಕೆಳಗಿಳಿಯಿತು. ಅದರಿಂದ ಅರ್ಜುನನ ತಲೆ ಉಳಿದು ಕಿರೀಟ ತುಂಡಾಯಿತು.

ಹರಿಯ ಲೀಲೆಗಳು ಒಂದೇ ಎರಡೇ. ಅವನ ಸೇವಕನಾದ ವಿಧಿ, ಯಾರ ದರ್ಪದ ಏಳ್ಗೆಯನ್ನು ಸಹಿಸನು. ತಲೆಯೆತ್ತಿದರೆ ಮೊಟಕಿಸದೇ ಬಿಡನು. ಆದ್ದರಿಂದ ನಾವು ಅಹಮಿಕೆಯನ್ನು ತ್ಯಜಿಸಬೇಕು. ಸತ್ಪಥದಲ್ಲಿ ನಡೆಯಬೇಕು.

13/05/2024

ಎಂದೊ ನಿನಗೊಂದುದಿನ ಮೂಗು ಮುರಿಯುವುದು ದಿಟ |
ವೃಂದಾರಕರು ಮತ್ಸರಿಸರೆ, ಗರ್ವಿತರ? ॥
ಸಂದರ್ಭಗಳನದಕೆ ಜೋಡಿಪನು ವಿಧಿರಾಯ |
ಅಂದಿಕೊಳ್ಳನೆ ನಿನ್ನ? - ಮಂಕುತಿಮ್ಮ || ೬೫೯

ವೃಂದಾರಕರು = ದೇವತೆಗಳು; ಅಂದಿಕೊಳ್ಳು = ಹಿಡಿದುಕೋ, ನಿಯಂತ್ರಣದಲ್ಲಿಟ್ಟುಕೋ.

'ಒಂದು ಪಗಲೆತ್ತುವುದು, ಒಂದು ಪಗಲುರುಳಿಪುದು, ಮಾನುಷಮನೆಲ್ಲಮನ್, ಮಿತಿಯರಿತು ನೆಗಳ್ವರ್ಗೆ ದೇವತೆಗಳೊಲಿದಪರ್, ಮುರಿದಪರ್ ಮಿಕ್ಕರನ್' - ಬಿಎಂಶ್ರೀ ರವರ ಅಶ್ವತ್ಥಾಮನ್ ನಾಟಕದ ಈ ಮಾತು ಪ್ರಸ್ತುತ ಕಗ್ಗದ ವ್ಯಾಖ್ಯಾನದಂತಿದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ಅವನ ಗರ್ವಭಂಗ ಖಚಿತ. ದೇವತೆಗಳೂ ಕೂಡಾ ಮಿತಿ ಮೀರಿದವರನ್ನು ಬಿಡುವುದಿಲ್ಲ. ಅತಿಯಾದುದು ಎಂದಿಗೂ ಒಳಿತು ಮಾಡಿಲ್ಲ.

ಹಾವೊಂದು ತನ್ನ ಕೆಟ್ಟ ಗುಣ ಬಿಟ್ಟರೆ ಜನ ಕಲ್ಲು ಬಡಿಗೆಗಳಿಂದ ಹೊಡೆಯದೇ ಇರುತ್ತಾರೆಯೇ. ಕಚ್ಚದಿದ್ದರೂ ಬುಸುಗುಡದಿದ್ದರೆ ಹಾನಿ ಖಚಿತ. ಒಳಿತಾಗಲೀ ಕೆಡುಕಾಗಲೀ ಆಧಿಕ್ಯದಿಂದ ಹಾನಿಯೇ ಹೊರತು ಪ್ರಯೋಜನವಿಲ್ಲ. ನೋವಿನೊಳಗಾಣದಲಿ ಹಿಂಡದೇ ಇದ್ದರೆ ನಲಿವಿನ ಪರಿಮಳ ಸಿಗದು. ಕಷ್ಟದ ಅರಿವಿಲ್ಲದಿದ್ದವನಿಗೆ ಸುಖದ ರುಚಿ ಸಿಗಲಾರದು. ದುಷ್ಟರ ಇತಿಹಾಸವನ್ನು ಗಮನಿಸಿದಾಗ ಎಲ್ಲ ಖಳರೂ ತಮ್ಮ ಅಹಮಿಕೆಯ ಉತ್ತುಂಗವನ್ನು ತಲುಪಿದ ಮೇಲೆ ಪಾತಾಳಕ್ಕೆ ಇಳಿಯುವುದು ಕಂಡುಬರುತ್ತದೆ.

ವಿಧಿಯು ನಮ್ಮ ಗರ್ವಕ್ಕೆ ಪೆಟ್ಟು ಕೊಡುವ ಸಲುವಾಗಿ ಸಂದರ್ಭಗಳನ್ನು ಸೃಷ್ಟಿಸುತ್ತಾನೆ. ಅದೂ ಹೆಚ್ಚಿನ ತಪ್ಪುಗಳನ್ನು ಮಾಡಿಸಿ, ಮಾಡಿದವನ ಒಪ್ಪ ಮಾಡಿಬಿಡುತ್ತಾನೆ. ದೈವವು ನಮ್ಮನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಬಿಡದು ಎನ್ನುವುದು ಮತ್ತು ನಾವೂ ಮಿತಿಯರಿತು ನಡೆಯಬೇಕೆನ್ನುವುದು ಇದರ ಸಾರಾಂಶವಾಗಿದೆ. ತಗ್ಗಿ ಬಗ್ಗಿ ನಡೆದವನು ತಡೆಯಿಲ್ಲದ ಸಾಧನೆ ಮಾಡುತ್ತಾನೆ. ಆದ್ದರಿಂದ ಎಚ್ಚರಿಕೆಯ ಬಾಳನ್ನು ಬಾಳೋಣ.

12/05/2024

ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ |
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ||
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- |
ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ || ೬೫೮

ಜಗತ್ತಿನಲ್ಲಿ ಮೊದಲು ತಾನು ಸರಿಯಾಗಿ ಅನಂತರ ಬೇರೆಯವರಿಗೆ ಸರಿಯಾಗಿರು ಎಂದು ಹೇಳಬೇಕು ಅಥವಾ ನಾನು ಹಾಳಾಗಿದ್ದೇನೆ, ನನ್ನಂತೆ ನೀನೂ ಹಾಳಾಗಬೇಡ ಎಂದು ತಿಳಿ ಹೇಳಬೇಕು. ಆದರೆ ಲೋಕದ ವಿಚಿತ್ರ ನೋಡಿ ತಾನು ಹೇಗಿದ್ದರೂ ಸರಿ ಪರರಿಗೆ ಪುಕ್ಕಟೆ ಸಲಹೆ ಕೊಡುವ ಮಂದಿಯೇ ಹೆಚ್ಚು. ಜೀವನದ ಅನೇಕ ಪ್ರಸಂಗಗಳಲ್ಲಿ ನಮ್ಮ ನಿರ್ಧಾರಗಳು ಸರಿ ಬರದೆ ಅನೇಕ ಬಾರಿ ತಪ್ಪು ಹಾದಿ ತುಳಿದು ಮತ್ತೆ ಸರಿದಾರಿಗೆ ಬರುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಯಾವುದೋ ವಿಷಯಕ್ಕೆ ಆಸೆಪಟ್ಟು ಅದನ್ನು ಪಡೆಯಲಿಕ್ಕೆ ಹೋರಾಡಿ ಕೊನೆಗೆ ಸೋಲು ಅನುಭವಿಸಿದ್ದು ಇದೆ.

ಅವರಿವರ ಮಧ್ಯೆ ನಮ್ಮನ್ನು ಗುರುತಿಸಿಕೊಳ್ಳಲು ಗದ್ದಲ ಎಬ್ಬಿಸುವುದರಲ್ಲಿ ನಾವು ನಿಸ್ಸಿಮರು. ಇಂತಹ ವ್ಯಕ್ತಿಯನ್ನು ದಿವಿಜರು ಗೆಳೆಯಾ ನಿನ್ನ ಉದ್ಧಾರ ಎಷ್ಟಾಯ್ತು? ಎಂದು ಪ್ರಶ್ನಿಸುತ್ತಾರೆ. ಪ್ರಪಂಚವನ್ನು ಸುಧಾರಿಸುವ ಕೆಲಸ ನಿನ್ನದಲ್ಲ. ಅದಕ್ಕೆಂದೇ ಮಹನೀಯರಿದ್ದಾರೆ. ನೀನು ಮೊದಲು ನಿನ್ನ ಆತ್ಮೋದ್ಧಾರ ಮಾಡಿಕೊ. ಆತ್ಮೋದ್ಧಾರವಾಗದೆ ಬೇರೆಯವರನ್ನು ಉದ್ಧರಿಸಲು ಸಾಧ್ಯವಿಲ್ಲ. ಬಹುತೇಕ ಜನ ಸೋಲುವುದು ಇಂತಹ ಸಂದರ್ಭಗಳಲ್ಲಿಯೇ. ಇದನ್ನೇ ಬಸವಣ್ಣ ಹೀಗೆ ಹೇಳಿದ್ದಾರೆ. ನೆರೆಮನೆಯವರ ದುಃಖ ಕಂಡು ಆಳುವವರ ಮೆಚ್ಚ ನಮ್ಮ ಕೂಡಲಸಂಗಮದೇವಾ - ಎಂತಹಾ ಉದಾತ್ತವಾದ ಮಾತು. ಹೀಗೆ ಆಗುವುದೇ ನಮ್ಮ ಮೊದಲ ಗುರಿಯಾಗಲಿ.

11/05/2024

ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ |
ಕರುಬಿ ಜನ ಕೆಸರುದಾರಿಯಲಿ ಸಾಗುವುದು ||
ಬಿರುದ ಗಳಿಸಲಿಕೆಸಪ, ಹೆಸರ ಪಸರಿಸಲೆಸಪ |
ದುರಿತಗಳ್ಗೆಣೆಯುಂಟೆ? - ಮಂಕುತಿಮ್ಮ || ೬೫೭

ಹಾದಿಗಳಲ್ಲಿ ಎರಡು ವಿಧ. ಒಂದು ಸುಪಥ; ಒಳ್ಳೆಯ ಹಾದಿ, ಇನ್ನೊಂದು ಕುಪಥ; ಕೆಟ್ಟ ಹಾದಿ. ಮನುಷ್ಯನಿಗೆ ಇಲ್ಲಿ ಆಯ್ಕೆ ಎರಡೇ. ಒಂದೋ ಒಳ್ಳೆಯ ಹಾದಿಯಲ್ಲಿ ಸಾಗಿ ಸಾಧಿಸುವುದು, ಇನ್ನೊಂದು ಅಡ್ಡದಾರಿ ಹಿಡಿಯುವುದು. ಇತಿಹಾಸವನ್ನು ಗಮನಿಸಿದರೆ ಜನ ಅಡ್ಡದಾರಿ ಹಿಡಿಯುವುದು ಸಂಪತ್ತು ಗಳಿಸಲಿಕ್ಕೆ ಅಥವಾ ಗಂಡು/ಹೆಣ್ಣನ್ನು ಪಡೆಯುವ ಸಲುವಾಗಿ ಮಾತ್ರ ಅಲ್ಲ. ತಂತಮಗೆ ಹೆಸರು, ಕೀರ್ತಿ ಗಳಿಸುವ ಸಲುವಾಗಿ ಮತ್ತು ಅದನ್ನು ಜಗತ್ತಿಗೆ ಹರಡುವ ಸಲುವಾಗಿ. ಇದನ್ನು ಮಾಡಲು ಅವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು. ಈ ವಿಚಾರದಲ್ಲಿ ಅವರು ಮಾಡುವ ಪಾಪಗಳಿಗೆ ಹೋಲಿಕೆ ಮಾಡಲಾಗದು ಎಂದು ತಿಮ್ಮಗುರು ಅಪ್ಪಣೆ ಕೊಡಿಸಿದ್ದಾರೆ.

ಪುರಂದರ ದಾಸರು ಕೇಳುತ್ತಾರೆ ಯಾರು ಹಿತವರು ನಿನಗೆ? ನಾರಿಯೋ, ಧಾರಿಣಿಯೋ, ಬಲು ಧನದ ಸಿರಿಯೋ ಎಂದು. ಜನ ಧನಿಕರಾಗಲು ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಯಾರ ಮನೆಯನ್ನಾದರೂ ಕೊಳ್ಳೆ ಹೊಡೆದರೂ ಸರಿಯೆ ತಮ್ಮ ಮನೆ ತುಂಬಿಸಿಕೊಳ್ಳುತ್ತಾರೆ. ಇನ್ನು ಹೆಣ್ಣನ್ನು ಪಡೆವ ಸಲುವಾಗಿ ಯಾವ ಮಟ್ಟದ ಸುಳ್ಳನ್ನು ಹೇಳಲೂ ಸಿದ್ದವಾಗುತ್ತಾರೆ. ಕಲ್ಯಾಣವು ಸಾವಿರ ಸುಳ್ಳಿನ ಕಂಬದ ಮಂಟಪವೇ ಅಲ್ಲವೇ.

ಹಾಗಾದರೆ ಧನ ಮತ್ತು ಸ್ತ್ರೀ ಸಂಪಾದನೆಗೆ ಮಾತ್ರ ಹೀಗೆ, ಎಂದು ಕೊಂಡರೆ ಅಲ್ಲ. ಪ್ರತಿಯೊಬ್ಬರಿಗೂ ತಮ್ಮ ಹೆಸರಿನ ಹಂಬಲವೇ ದೊಡ್ಡದು. ತಾವು ಹೇಗಾದರೂ ಇರಲಿ ಜಗತ್ತು ನಮ್ಮನ್ನು ಹೊಗಳಬೇಕು ಎನ್ನುವ ಮಂದಿಯೇ ಹೆಚ್ಚು. ಅದಕ್ಕಾಗಿ ತಮ್ಮ ಸುತ್ತಾ ವಂದಿ ಮಾಗಧರ ಪಡೆಯನ್ನೇ ಇಟ್ಟುಕೊಂಡು ಅವರಿಂದ ಬೋಪರಾಕು ಹೇಳಿಸಿಕೊಳ್ಳುತ್ತಾರೆ. ಆ ಕಾರಣಕ್ಕೆ ಇಂದು ಪ್ರಶಸ್ತಿಗಳೆಲ್ಲಾ ಬಹುತೇಕ ವಶೀಲಿಯಿಂದಲೇ ಕೂಡಿವೆ. ಹೆಸರು ಹೆಸರೆಂದು ಬಸವಳಿವಿರೇಕಯ್ಯಾ? ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಮತ್ತು ಈ ಹೆಸರನ್ನು ಗಳಿಸಲು ಅವರು ಹಿಡಿವ ಹಾದಿಗಳು ಅಸಹ್ಯ ಹುಟ್ಟಿಸುತ್ತವೆ. ಆದ್ದರಿಂದ ನಾವು ಈ ಹಾದಿಯನ್ನು ಬಿಟ್ಟು ಸುಪಥದಲ್ಲಿ ಎಂದರೆ ಧರ್ಮಮಾರ್ಗದಲ್ಲಿ ಸಾಗಬೇಕು ಎನ್ನುವುದು ಕಗ್ಗದ ಆಶಯವಾಗಿದೆ.

Address

Hosaholalu
Bangalore
571426

Telephone

+919008820892

Website

Alerts

Be the first to know and let us send you an email when ಈ ಮನಸು posts news and promotions. Your email address will not be used for any other purpose, and you can unsubscribe at any time.

Contact The Business

Send a message to ಈ ಮನಸು:

Share

Category


Other Pets in Bangalore

Show All

You may also like